ತಲೆ ನೋವು, ಸೊಂಟ ನೋವು, ವಿಪರೀತ ಜ್ವರದ ಜೊತೆ ನಿಶಕ್ತಿ, ರಕ್ತಸ್ರಾವಕ್ಕೂ ಕಾರಣವಾಗಬಲ್ಲ ಮಂಗನ ಕಾಯಿಲೆಗೆ ಈವರೆಗೂ ಔಷಧ ತಯಾರಾಗಿಲ್ಲ. ಈ ಹಿನ್ನಲೆ ಬೆಟ್ಟದ ಉಣ್ಣೆಗಳಿಂದ ಹರಡುವ ಈ ರೋಗದ ಬಗ್ಗೆ ಮುನ್ನಚ್ಚರಿಕೆವಹಿಸುವುದು ಮಾತ್ರ ಮದ್ದು!
`ಶಿವಮೊಗ್ಗ ಜಿಲ್ಲೆಯ ಸೊರಬದ ಕ್ಯಾಸನೂರು ಬಳಿ 1956ರಲ್ಲಿ ಮಂಗನ ಕಾಯಿಲೆ ಮೊದಲು ಕಾಣಿಸಿಕೊಂಡಿತು. ಕಾಡಿನಲ್ಲಿ ಮಂಗಗಳು ಸಾವನಪ್ಪುವುದು ಈ ರೋಗ ಹರಡುವಿಕೆಯ ಮೊದಲ ಮುನ್ಸೂಚನೆ. ಪ್ಲಾವಿ ವೈರಸ್ ಎಂಬ ವೈರಾಣು ಹೊಂದಿದ ಉಣ್ಣೆಗಳು ಕಚ್ಚುವುದರಿಂದ ಈ ರೋಗ ಮನುಷ್ಯನಿಗೆ ಬರುತ್ತದೆ. ಹೀಗಾಗಿ ಉಣ್ಣೆ ಕಚ್ಚಿಸಿಕೊಳ್ಳುವುದರಿಂದ ರಕ್ಷಣೆ ಪಡೆಯುವುದು ಉತ್ತಮ’ ಎಂದು ಯಲ್ಲಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ ನರೇಂದ್ರ ಪವಾರ್ ಹೇಳಿದ್ದಾರೆ.
ಯಲ್ಲಾಪುರ ತಹಶೀಲ್ದಾರ್ ಯಲ್ಲಪ್ಪ ಗೋಣನನ್ನವರ್ ಅಧ್ಯಕ್ಷತೆಯಲ್ಲಿ ಖಾಸಗಿ ವೈದ್ಯರ ಕಾರ್ಯಾಗಾರ ನಡೆದಿದ್ದು, ಈ ವೇಳೆ ಆರೋಗ್ಯ ಸಿಬ್ಬಂದಿಗೆ ಡಾ ನರೇಂದ್ರ ಪವಾರ್ ಅವರು ಅರಿವು ಮೂಡಿಸಿದರು. `ಮಂಗನ ಕಾಯಿಲೆ ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ’ ಎಂದವರು ಸ್ಪಷ್ಟಪಡಿಸಿದರು. `ಮಂಗನ ಕಾಯಿಲೆಗೆ ಒಳಗಾದವರಿಗೆ ಸತತ 8-10 ದಿನದವರೆಗೆ ನಿರಂತರ ಜ್ವರವಿರುತ್ತದೆ. ಜ್ವರ ಬಂದ ಎರಡು ವಾರದ ನಂತರ ಮುಗು, ಬಾಯಿ ಹಾಗೂ ಗುದದ್ವಾರದಿಂದ ರಕ್ತಸ್ರಾವದ ಸಾಧ್ಯತೆಗಳಿವೆ. ಕೈಕಾಲು ನೋವು, ನಿಶಕ್ತತೆ, ಕಣ್ಣು ಕೆಂಪಾಗುವುದು ಸಾಮಾನ್ಯ’ ಎಂದವರು ವಿವರಿಸಿದರು.
`ಕಾಡಿಗೆ ಹೋಗುವ ಮುನ್ನ ಡೇಪೋ ತೈಲವನ್ನು ಕೈ-ಕಾಲುಗಳಿಗೆ ಲೇಪಿಸಿಕೊಳ್ಳಬೇಕು. ಮೈ ತುಂಬ ಬಟ್ಟೆ ಧರಿಸಿ ಸಂಚರಿಸಬೇಕು. ಕಾಡಿನಿಂದ ಮರಳಿದ ನಂತರ ಸೋಪು ಬಳಸಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಬಟ್ಟೆಗಳನ್ನು ಸಹ ಬಿಸಿ ನೀರಿನಿಂದ ತೊಳೆಯಬೇಕು. ಮನೆ ಸುತ್ತಲಿನ ಪ್ರದೇಶ ಸ್ವಚ್ಛವಾಗಿರಿಸಿಕೊಳ್ಳುವುದರ ಜೊತೆ ಮಂಗ ಸಾವನಪ್ಪಿರುವುದು ಗೊತ್ತಾದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು’ ಎಂದು ಅವರು ಮುನ್ನಚ್ಚರಿಕಾ ವಿಧಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದರು.
`ಮಂಗನ ಕಾಯಿಲೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹರಡುತ್ತದೆ. ಹೀಗಾಗಿ ಇಂಥ ನಿರ್ಧಿಷ್ಟ ಸ್ಥಳದಲ್ಲಿಯೇ ಕಾಯಿಲೆ ಬಂದಿದೆ ಎಂದು ಹೇಳುವುದು ಕಷ್ಟ. ಈ ಕಾಯಿಲೆಗೆ ನಿರ್ದಿಷ್ಟವಾದ ಔಷಧಿ ಸಹ ಇಲ್ಲ. ಹೀಗಾಗಿ ಜನ ಮುನ್ನಚ್ಚರಿಕೆವಹಿಸುವುದರ ಜೊತೆ ಆರೋಗ್ಯ ಇಲಾಖೆ ಹಾಗೂ ಆಶಾ ಸಿಬ್ಬಂದಿ ಜೊತೆಯೂ ಜನ ನಿರಂತರ ಸಂಪರ್ಕದಲ್ಲಿರಬೇಕು’ ಎಂದವರು ಕರೆ ನೀಡಿದರು.




