ಕಾರವಾರ ಬಾಂಡಿಶೆಟ್ಟಾದ ಹೆಸ್ಕಾಂ ಎದುರಿನ ವಿದ್ಯುತ್ ಕಂಬಕ್ಕೆ ಸ್ಕೂಟಿ ಡಿಕ್ಕಿಯಾಗಿದ್ದರಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ಐಟಿಐ ವಿದ್ಯಾರ್ಥಿ ಸ್ವಯಂ ಬಿಣಗೆ (21) ಸಾವನಪ್ಪಿದ್ದಾರೆ.
ಬಿಣಗಾ ದತ್ತಾತ್ರೇಯ ದೇವಸ್ಥಾನ ಬಳಿ ಸ್ವಯಂ ಬಿಣಗೆ ವಾಸವಾಗಿದ್ದರು. ಫೆ 15ರ ರಾತ್ರಿ ಅವರು ಟೋಲನಾಕಾ ಕಡೆಯಿಂದ ಬಾಂಡಿಶೆಟ್ಟಾ ಕಡೆ ಸ್ಕೂಟಿ ಓಡಿಸಿಕೊಂಡು ಬಂದಿದ್ದರು. ಬಾಂಡಿಶಟ್ಟಾ ಹೆಸ್ಕಾಂ ಕಚೇರಿ ಎದುರಿನ ವಿದ್ಯುತ್ ಕಂಬಕ್ಕೆ ಸ್ಕೂಟಿ ಗುದ್ದಿದ ಪರಿಣಾಮ ಚರಂಡಿಗೆ ಬಿದ್ದರು. ಚರಂಡಿಯ ಸ್ಲಾಬಿಗೆ ತಲೆ ಬಡಿದಿದ್ದರಿಂದ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು.
ಅವರನ್ನು ಕಾರವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಮಡಗಾಂವಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸರಿ ಸುಮಾರು 10 ದಿನಗಳ ಕಾಲ ಚಿಕಿತ್ಸೆ ನೀಡಿದರೂ ಸ್ವಯಂ ಬಿಣಗೆ ಚೇತರಿಸಿಕೊಳ್ಳಲಿಲ್ಲ. ಫೆ 26ರಂದು ಅವರು ಸಾವನಪ್ಪಿದರು. ಕೋಡಿಬೀರ ದೇವಸ್ಥಾನ ಬಳಿಯ ಗಿರೀಶ ಹರಿಕಂತ್ರ ಈ ಬಗ್ಗೆ ಪೊಲೀಸರಿಗೆ ವರದಿ ಒಪ್ಪಿಸಿದ್ದು, ಕಾರವಾರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




