ಕಾರವಾರದ ಅಸ್ನೋಟಿ ಶಿವಾಜಿ ವಿದ್ಯಾಮಂದಿರ ಹಾಗೂ ಸ್ಮೀತಾ ಆರ್ ಪ್ರಭು ಪೌಂಡೇಶನ್ ನೀಡುವ ರಾಜ್ಯಮಟ್ಟದ ಶಿಕ್ಷಣ ಸೇವಾ ರತ್ನ ಪ್ರಶಸ್ತಿಗೆ ನಿವೃತ್ತ ಮುಖ್ಯಾಧ್ಯಾಪಕಿ ಪ್ರಮೀಳಾ ದತ್ತಾತ್ರೇಯ ಪವಾರ್ ಅವರು ಭಾಜನರಾಗಿದ್ದಾರೆ. ಪ್ರಮೀಳಾ ದತ್ತಾತ್ರೇಯ ಪವಾರ್ ಅವರು ಶಿವಾಜಿ ವಿದ್ಯಾ ಮಂದಿರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶನಿವಾರ ಭಾರತೀಯು ವಾಯು ಸೇನೆಯ ಅಧಿಕಾರಿ ಶಾಮ ಕುಮಾರ ದೇಸಾಯಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು `ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಶೈಕ್ಷಣಿಕ ಕೊಡುಗೆ ನೀಡಿದ ಪ್ರಮೀಳಾ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಖುಷಿಯ ವಿಚಾರ’ ಎಂದರು. ಸತ್ಯಸಾಯಿ ಶಾಲೆಯ ಅಧ್ಯಕ್ಷ ಗಿರೀಶ್ ಎಚ್ ಎಸ್ ಮಾತನಾಡಿ `ಅರ್ಹ ವ್ಯಕ್ತಿಗೆ ಯೋಗ್ಯ ಪ್ರಶಸ್ತಿ ಸಿಕ್ಕಿದೆ. ಇದರಿಂದ ಪ್ರಶಸ್ತಿಯ ಗೌರವ ಹೆಚ್ಚಾಗಿದೆ’ ಎಂದು ಅಭಿಪ್ರಾಯಪಟ್ಟರು.
ಬಿಸಿಎಮ್ ಇಲಾಖೆಯ ಅಧಿಕಾರಿ ವಿಶಾಲ್ ಕಾಂಬ್ಳೆ ಮಾತನಾಡಿ `ನಾವು ಮಾಡುವ ಸೇವೆ ಜನಮಾನಸದಲ್ಲಿ ನೆಲೆಯೂರುವಂತಿರಬೇಕು. ಅಂಥ ಸೇವೆ ನೀಡಿದವರಿಗೆ ಈ ವೇದಿಕೆ ಗೌರವಿಸಿದ್ದು ಸಾರ್ಥಕ’ ಎಂದರು. ಜಿ ಎಸ್ ಶಿವರುದ್ರಪ್ಪ ಅವರ ರಚನೆಯ ಭಾವಗೀತೆಯೊಂದನ್ನು ಅವರು ಪ್ರಸ್ತುತಪಡಿಸಿದರು. ಸತ್ಯಸಾಯಿ ಶಾಲೆಯ ಪ್ರಾಚಾರ್ಯ ಅಶೋಕ ಗಾಂವಕರ್ ಮಾತನಾಡಿ `ಗ್ರಾಮೀಣ ಭಾಗದಲ್ಲಿ ಬದುಕಿ ಉತ್ತಮ ಸಂಸ್ಕಾರದೊoದಿಗೆ ಆದರ್ಶ ವ್ಯಕ್ತಿತ್ವ ರೂಡಿಸಿಕೊಂಡ ಪ್ರಮೀಳಾ ಅವರ ಬದುಕು-ಬರಹ ಎಲ್ಲರಿಗೂ ಮಾದರಿ’ ಎಂದರು. ಪ್ರಮುಖರಾದ ಪವನ್ ಸಾವಂತ್ ಅವರು ಈ ವೇಳೆ ವಿದ್ಯಾರ್ಥಿಗಳಿಗೆ ಸಮಯದ ಮಹತ್ವ, ಸಾಧನೆಯ ಗುರಿಯ ಬಗ್ಗೆ ವಿವರಿಸಿದರು.
ರಾಮನಾಥ ದೇವಸ್ಥಾನದ ಟ್ರಸ್ಟಿ ರಂಜಿತ್ ದೇಸಾಯಿ, ಅಸ್ನೋಟಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಗಿರೀಶ್ ದೇಸಾಯಿ, ಪ್ರಮುಖರಾದ ಪ್ರೀತಿ ಸಾವಂತ, ಪ್ರಶಸ್ತಿ ವಿಜೇತೆ ಪ್ರಮೀಳಾ ದತ್ತಾತ್ರೇಯ ಪವಾರ್ ಮಾತನಾಡಿದರು. ಶಾಲಾ ಮುಖ್ಯಾಧ್ಯಾಪಕ ದಿನೇಶ ಗಾಂವ್ಕರ್ ಅಧ್ಯಕ್ಷತೆವಹಿಸಿದ್ದರು. ಗುರೂಜಿ ಆರ್ ಜಿ ಪ್ರಭು ಅವರ ಸಾಮಾಜಿಕ ಕಳಕಳಿಯನ್ನು ಸ್ಮರಿಸಿದರು. ವೇದಿಕೆಯಲ್ಲಿ ನಿವೃತ್ತ ಆರಕ್ಷಕ ನಿರೀಕ್ಷಕರಾದ ಶಿವಾನಂದ ಮೇತ್ರಿ, ಶಿಕ್ಷಕರಾದ ಸಂತೋಷ ಕಾಂಬ್ಳೆ, ಜೆ ಬಿ ತಿಪ್ಪೇಸ್ವಾಮಿ, ರೂಪಾಲಿ ಸಾವಂತ ಹಾಜರಿದ್ದರು. ನಾಗವೇಣಿ ತಳೇಕರ್ ಪ್ರಾರ್ಥಿಸಿದರು. ಗಣೇಶ ಬಿಷ್ಠಣ್ಣನವರ ಸ್ವಾಗತಿಸಿ, ನಿರ್ವಹಿಸಿದರು. ವಿಜಯಕುಮಾರ ನಾಯಕ ವಂದಿಸಿದರು.






