ಪ್ರತ್ಯೇಕ ಜಿಲ್ಲೆಗಾಗಿ ಪ್ರತ್ಯೇಕ ಹೋರಾಟ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ `ಈವರೆಗೆ ಒಂದು ಲೆಕ್ಕ.. ಇನ್ಮುಂದೆ ಬೇರೆ ಲೆಕ್ಕ’ ಎಂದು ಗುಡುಗಿದ್ದರು. ಅದಾದ ನಂತರ ಅವರು ಹೈಟೆಕ್ ಆಸ್ಪತ್ರೆಯ ಇನ್ನೊಂದು ಹೋರಾಟ ಕೈಗೆತ್ತಿಕೊಂಡಿದ್ದು, ಹಳೆ ಲೆಕ್ಕಾಚಾರದ ವಿಷಯವನ್ನು ಮರೆತರು. ಪರಿಣಾಮ ಈ ಅಧಿವೇಶನದ ವೇಳೆ ಪ್ರತ್ಯೇಕ ಜಿಲ್ಲೆ ಹೋರಾಟ ವಿಷಯ ನೆನೆಗುದಿಗೆ ಬಿದ್ದಿದ್ದು, ಇದೀಗ ಕಂದಾಯ ಸಚಿವರೇ `ಹೊಸ ಜಿಲ್ಲಾ ರಚನೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ’ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭಾ ಅಧಿವೇಶನದ ವೇಳೆ ಅನಂತಮೂರ್ತಿ ಹೆಗಡೆ ಅಧೀವೇಶನ ನಡೆಯುವ ಸ್ಥಳಕ್ಕೆ ತೆರಳಿ ಪ್ರತಿಭಟಿಸಿದ್ದರು. ವಿವಿಧ ಜನಪ್ರತಿನಿಧಿಗಳು ಸಹ ಅವರನ್ನು ಬಂದು ಮಾತನಾಡಿಸಿದ್ದರು. ಅನಂತಮೂರ್ತಿ ಹೆಗಡೆ ಅವರ ಆಕ್ರೋಶವನ್ನು ಸಮಾಧಾನ ಮಾಡುವ ಪ್ರಯತ್ನವನ್ನು ಮಾಡಿದ್ದರು. ಕೆಲ ಶಾಸಕರು ಭರವಸೆ ನೀಡಿ, `ನಾವು ನಿಮ್ಮೊಂದಿಗಿದ್ದೇವೆ’ ಎಂದು ಹೇಳಿಕೆ ಕೊಟ್ಟಿದ್ದರು. ಹೊರಗೆ ನೀಡಿದ ಭರವಸೆಯ ಮಾತನ್ನು ಅಧಿವೇಶನದ ಒಳಗೆ ಪುನರುಚ್ಚರಿಸಲಿಲ್ಲ. ತಮಗೆ ನೀಡಿದ ಮಾತಿನ ಪ್ರಕಾರ ಅಧಿವೇಶನದಲ್ಲಿ ಮಾತನಾಡದ ಬಗ್ಗೆ ಅನಂತಮೂರ್ತಿ ಹೆಗಡೆ ಸಹ ಜನಪ್ರತಿನಿಧಿಗಳನ್ನು ಪ್ರಶ್ನಿಸಲಿಲ್ಲ.
ಸದ್ಯ ನಡೆಯುತ್ತಿರುವ ಅಧಿವೇಶನದ ವೇಳೆಯಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಯಾವ ಜನಪ್ರತಿನಿಧಿಯೂ ಪ್ರತ್ಯೇಕ ಜಿಲ್ಲೆಗಾಗಿ ಬೇಡಿಕೆ ಮಂಡಿಸಲಿಲ್ಲ. ಈ ಹಿಂದಿನ ಹೋರಾಟದಲ್ಲಿ ಭಾಗಿಯಾದವರಿಗೆ ಸಹ ಸದ್ಯದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದು ನೆನಪಾಗಲಿಲ್ಲ. ಅದಾಗಿಯೂ, ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ `ತಮ್ಮ ಕ್ಷೇತ್ರವನ್ನು ಜಿಲ್ಲಾಕೇಂದ್ರವನ್ನಾಗಿ ಘೋಷಿಸಿ’ ಎಂದು ಸದನದಲ್ಲಿ ಒತ್ತಾಯಿಸಿದರು. ಆಗ `ಹೊಸ ಜಿಲ್ಲೆ ಸೃಷ್ಠಿಸುವ ಯಾವುದೇ ವಿಚಾರ ಸರ್ಕಾರದ ಮುಂದಿಲ್ಲ’ ಎನ್ನುವ ಮೂಲಕ ಕಂದಾಯ ಸಚಿವ ಕೃಷ್ಣ ಬೈರೆಗೌಡ ಉತ್ತರ ಕನ್ನಡ ಜಿಲ್ಲೆಯನ್ನು ಒಡೆಯುವವರ ಪ್ರಯತ್ನಕ್ಕೂ ತಣ್ಣೀರು ಎರಚಿದರು.
`ಜನಗಣತಿ ಅವಧಿಯಲ್ಲಿ ಯಾವ ರಾಜ್ಯವೂ ಹೊಸ ಜಿಲ್ಲೆ ಮಾಡುವ ಹಾಗಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ನಿಯಮವಿದೆ. ಹೊಸ ತಾಲೂಕು ಸಹ ಘೋಷಣೆ ಮಾಡುವ ಹಾಗಿಲ್ಲ. ಹೀಗಾಗಿ ಸರ್ಕಾರದ ಮುಂದೆ ಹೊಸ ಜಿಲ್ಲೆ ಅಥವಾ ತಾಲೂಕು ರಚಿಸುವ ಯಾವ ಪ್ರಸ್ತಾಪವೂ ಇಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೆಗೌಡ ಎಲ್ಲರಿಗೂ ಕೇಳುವಂತೆ ಹೇಳಿದರು.







