ಆಶ್ರಯಮನೆ ಅಡಿ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಹಿಂಬರಹ ನೀಡದ ಕಾರಣ ಕುಮಟಾ ಹೊಲನಗದ್ದೆ ಪಿಡಿಓ ನಾಗರಾಜ ನಾಯ್ಕರ ವಿರುದ್ಧ ವೃದ್ದೆಯೊಬ್ಬರು ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ.
ಕುಮಟಾ ಜನತಾ ಫ್ಲೋಟ್ ಮಾಸೂರ ಕ್ರಾಸಿನ ಲಕ್ಷಿ ನಾಯ್ಕ ಅವರಿಗೆ ಇದೀಗ 77 ವರ್ಷ. 75ನೇ ವರ್ಷದಲ್ಲಿ ಅವರು ತಮಗೆ ಮನೆ ಇಲ್ಲದ ಬಗ್ಗೆ ಹೊಲನಗದ್ದೆ ಗ್ರಾಮ ಪಂಚಾಯತಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರಿಗೆ ಆಶ್ರಯಮನೆ ಬಗ್ಗೆ ಮಾಹಿತಿ ನೀಡುವಲ್ಲಿ ಪಿಡಿಓ ನಾಗರಾಜ ನಾಯ್ಕ ವಿಫಲರಾಗಿದ್ದರು. ಅರ್ಜಿಗೆ ನಿಯಮಾನುಸಾರ ಹಿಂಬರಹವನ್ನು ಸಹ ನೀಡಿರಲಿಲ್ಲ. ಈ ಹಿನ್ನಲೆ ಇದೀಗ ಪಂಚಾಯತ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಲಕ್ಷಿ ನಾಯ್ಕ ಅವರು ಅಂಚೆ ಮೂಲಕ ದೂರು ಪತ್ರ ರವಾನಿಸಿದರು.
`ತನ್ನ ಮನೆ ಮುರಿಯುವ ಹಂತದಲ್ಲಿದೆ. ಮಳೆಗಾಲದಲ್ಲಿ ಮನೆ ಸೋರುತ್ತದೆ. ಈ ಬಗ್ಗೆ ಅರಿವಿದ್ದರೂ ಅನಗತ್ಯವಾಗಿ ಪಿಡಿಓ ಸತಾಯಿಸುತ್ತಿದ್ದಾರೆ’ ಎಂದು ಅವರು ದೂರು ಪತ್ರದಲ್ಲಿ ವಿವರಿಸಿದ್ದಾರೆ. `ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳಿದ್ದರೂ ಅದು ತನಗೆ ಸಿಗದಂತೆ ನೋಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.







