ಕುಮಟಾದ ಓಂಕಾರ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದ ಸೊಸೈಟಿಯಲ್ಲಿ ಸಾಲಗಾರರು ಭದ್ರತೆಗೆ ನೀಡಿದ ಚೆಕ್ ದುರುಪಯೋಗವಾಗಿದೆ. ಸೊಸೈಟಿ ನಿರ್ದೇಶಕರೇ ಆ ಚೆಕ್’ನ್ನು ತಮ್ಮ ಹೆಸರಿಗೆ ಜಮಾ ಮಾಡಿಕೊಂಡಿದ್ದು, ಚೆಕ್ ಅಮಾನ್ಯವಾದ ಕಾರಣ ಸಾಲಗಾರರನ್ನು ಸತಾಯಿಸುತ್ತಿದ್ದಾರೆ.
ಕುಮಟಾದ ಬಸ್ತಿಪೇಟೆಯಲ್ಲಿರುವ ಓಂಕಾರ್ ಓಂಕಾರ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದ ಸೊಸೈಟಿಯಲ್ಲಿ ಚಿತ್ರಗಿಯ ಗುತ್ತಿಗೆದಾರ ಪ್ರಭಾಕರ ಭಂಡಾರಕರ್ 1 ಲಕ್ಷ ರೂ ಸಾಲ ಮಾಡಿದ್ದರು. 2020-21ರಲ್ಲಿ ಸಾಲ ಪಡೆದ ಅವರು ನಂತರ ಅದನ್ನು ಬಡ್ಡಿಸಹಿತ ತೀರಿಸಿದ್ದರು. ಸಾಲ ಮಾಡುವಾಗ ಅವರು ಭದ್ರತೆಗಾಗಿ ಎಸ್ಬಿಐ’ನ ಮೂರು ಚೆಕ್ ನೀಡಿದ್ದರು. ಆದರೆ, ಸಾಲ ಮರುಪಾವತಿ ವೇಳೆ ಸೊಸೈಟಿ ಶಾಖಾ ವ್ಯವಸ್ಥಾಪಕ ನಿಷ್ಠಂತ್ ಒಂದು ಚೆಕ್ ಮಾತ್ರ ಮರಳಿ ನೀಡಿದ್ದರು.
ಅದಾದ ನಂತರ ಓಂಕಾರ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದದ ನಿರ್ದೇಶಕರಾದ ವಿಶ್ವನಾಥ ಕೇಣಿ ಹಾಗೂ ಪ್ರಭಾಕರ ಬಾಳಗಿ ಇನ್ನೆರಡು ಚೆಕ್ ಬಳಸಿಕೊಂಡಿದ್ದರು. ಚೆಕ್ ಮೇಲೆ ಮೊತ್ತ ನಮೂದಿಸಿ ಅದನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ಪ್ರಯತ್ನಿಸಿದ್ದರು. ಆದರೆ, ಪ್ರಭಾಕರ ಭಂಡಾರಕರ್ ಅವರ ಖಾತೆಯಲ್ಲಿ ಆ ಪ್ರಮಾಣದಲ್ಲಿ ಹಣವಿಲ್ಲದ ಕಾರಣ ಚೆಕ್ ಅಮಾನ್ಯಗೊಂಡಿತು. ಇದಾದ ನಂತರ ಪ್ರಭಾಕರ ಭಂಡಾರಕರ್ ವಿರುದ್ಧ ವಿಶ್ವನಾಥ ಕೇಣಿ ಹಾಗೂ ಪ್ರಭಾಕರ ಬಾಳಗಿ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದರು.
ಆ ಮೂಲಕ ಸಾಲ ಪಡೆಯುವ ವೇಳೆ ಸೊಸೈಟಿಗೆ ನೀಡಿದ ಚೆಕ್’ನ್ನು ಅದೇ ಸೊಸೈಟಿ ನಿರ್ದೇಶಕರಿಬ್ಬರು ದುರುಪಯೋಗಪಡಿಸಿಕೊಂಡರು. ಜೊತೆಗೆ ಸಾಲ ಮಾಡಿ ಅದನ್ನು ಮರುಪಾವತಿ ಮಾಡಿದ ಪ್ರಭಾಕರ ಭಂಡಾರಕರ್ ಅವರಿಗೂ ಮಾನಸಿಕ ಹಿಂಸೆ ನೀಡಲು ಶುರು ಮಾಡಿದರು. ಸದ್ಯ ಇದನ್ನು ಸಹಿಸದ ಪ್ರಭಾಕರ ಭಂಡಾರಕರ್ ಕುಮಟಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಓಂಕಾರ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದದ ನಿರ್ದೇಶಕರಾದ ವಿಶ್ವನಾಥ ಕೇಣಿ ಹಾಗೂ ಪ್ರಭಾಕರ ಬಾಳಗಿ ಜೊತೆ ಶಾಖಾ ವ್ಯವಸ್ಥಾಪಕ ನಿಷ್ಠಂತ್ ಅವರ ಕುತಂತ್ರವನ್ನು ಅವರು ಪೊಲೀಸರ ಮುಂದೆ ಬಿಚ್ಚಿಟ್ಟರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೂರುದಾರರಿಗೆ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದ್ದಾರೆ.







