ಗೋವಾದಿಂದ ದಾಂಡೇಲಿ ಮಾರ್ಗವಾಗಿ ಹಾವೇರಿಗೆ ಸರಾಯಿ ಸಾಗಿಸುತ್ತಿದ್ದ ಚಾಲಕನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ತೆಂಗಿನ ಗರಿಗಳ ಅಡಿ ಎರಡು ಮೂಟೆ ಸರಾಯಿ ಅಡಗಿಸಿಟ್ಟಿದ್ದ ಮೊಹಮ್ಮದ ಅಲಿ ಕರಜಗಿಗೆ ಅಬಕಾರಿ ಸಿಬ್ಬಂದಿ ಜೈಲಿಗೆ ಕಳುಹಿಸಿದ್ದಾರೆ.
ಮಿನಿ ಅಶೋಕ ಲೈಲ್ಯಾಂಡ್ ವಾಹನ ಓಡಿಸುವ ಮೊಹಮ್ಮದ ಅಲಿ ಕರಜಗಿ ಅವರು ಸಾಮಗ್ರಿಯೊಂದರ ವಿತರಣೆಗೆ ಶುಕ್ರವಾರ ಗೋವಾಗೆ ಹೋಗಿದ್ದರು. ಅಲ್ಲಿಂದ ಮರಳುವಾಗ ಖಾಲಿ ಗಾಡಿಯಲ್ಲಿ ಎರಡು ಮೂಟೆ ಗೋವಾ ಸರಾಯಿ ಹಾಕಿಕೊಂಡು ಬಂದಿದ್ದರು.
ತಮ್ಮ ಊರಿನಲ್ಲಿ ಗೋವಾದ ಗೇರು ಬೀಜದಿಂದ ತಯಾರಿಸಿದ ಫೆನ್ನಿಗೆ ಬಹುಬೇಡಿಕೆಯಿರುವುದನ್ನು ಅರಿತ ಅವರು ಅದನ್ನು ಮಾರಾಟ ಮಾಡಿ ಹಣ ಮಾಡುವ ಉದ್ದೇಶ ಹೊಂದಿದ್ದರು. ಆದರೆ, ಆನಮೋಡು ತಪಾಸಣಾ ಕೇಂದ್ರದ ಸಿಬ್ಬಂದಿ ಅದಕ್ಕೆ ತಡೆ ಒಡ್ಡಿದರು.
ವಾಹನ ತಪಾಸಣೆ ನಡೆಸಿದ ಸರ್ಕಾರಿ ಸಿಬ್ಬಂದಿಗೆ ತೆಂಗಿನ ಗರಿ ಅಡಿ 12 ಸಾವಿರ ರೂ ಮೌಲ್ಯದ ಸರಾಯಿ ಸಿಕ್ಕಿತು. ಅಲ್ಲಿದ್ದ ಕ್ಯಾಶಿಯೋ ಫೆನ್ನಿಯನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದರು. ಜೊತೆಗೆ 8 ಲಕ್ಷ ರೂ ಮೌಲ್ಯದ ವಾಹನವನ್ನು ಅವರು ಜಪ್ತು ಮಾಡಿದರು.







