ಯಲ್ಲಾಪುರದ ಕುಂದರಗಿ ಬಳಿ ನಿತ್ಯದ ಊಟಕ್ಕಾಗಿ ಏಡಿ ಹಿಡಿಯಲು ಕೆರೆಗೆ ಹಾರಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಎರಡು ದಿನದ ನಂತರ ಶನಿವಾರ ಆತನ ಶವ ಕೆರೆಯಿಂದ ಮೇಲೆ ಬಂದಿದೆ.
ಭರತನಳ್ಳಿಯ ದಂಡಿಗೆಮನೆಯ ವಿನಾಯಕ ನಾಯ್ಕ (45) ಅವರು ಗುರುವಾರ ಮಂಗಳೂರಿಗೆ ಹೋಗಿದ್ದರು. ಮರಳಿ ಬಂದವರು ಮನೆಗೆ ಹೋಗುವ ಬದಲು ಏಡಿ ಹಿಡಿಯಲು ಸುಡ್ಲೆಮಟ್ಟಿ ಕೆರೆ ಕಡೆ ಹೋದರು. ಅವರಿಗೆ ಇನ್ನೂ ಮದುವೆ ಆಗಿರದ ಕಾರಣ ಹೇಳುವವರು-ಕೇಳುವವರು ಯಾರೂ ಇರಲಿಲ್ಲ. ಹೀಗಾಗಿ ತಮಗಿಷ್ಟವಾದ ರೀತಿ ಮೋಜು-ಮಸ್ತಿಯಿಂದ ಬದುಕುತ್ತಿದ್ದರು.
ಬಟ್ಟೆ ಬಿಚ್ಚಿ ನೀರಿಗೆ ಹಾರಿದ ಅವರು ಒಂದು ಸುತ್ತಿನ ಏಡಿ-ಮೀನು ಹಿಡಿದು ದಡಕ್ಕೆ ತಂದಿದ್ದರು. ಅದಾದ ನಂತರ ಮತ್ತೆ ನೀರಿಗೆ ಧುಮುಕಿದವರು ಮತ್ತೆ ಮೇಲೆ ಬರಲಿಲ್ಲ. ವಿನಾಯಕ ನಾಯ್ಕ ಅವರಿಗೆ ಈಜು ಬರುತ್ತಿರಲಿಲ್ಲ. ಜೊತೆಗೆ ಆಗಾಗ ಮದ್ಯ ಸೇವನೆಯ ವ್ಯಸನವೂ ಇತ್ತು. ಮದ್ಯದ ನಶೆಯಲ್ಲಿಯೇ ಅವರು ನೀರಿಗೆ ಧುಮುಕಿದ ಅನುಮಾನಗಳಿವೆ.
ಇನ್ನೂ ಶನಿವಾರ ಕೆರೆಯಲ್ಲಿ ಶವ ನೋಡಿದ ಜನ ಪೊಲೀಸರಿಗೆ ಫೋನ್ ಮಾಡಿದರು. ಕೆರೆ ದಡದಲ್ಲಿ ವಿನಾಯಕ ನಾಯ್ಕರ ಬಟ್ಟೆ-ಮೊಬೈಲ್ ಜೊತೆ ಒಂದಷ್ಟು ಮೀನು ಹಾಗೂ ಏಡಿಗಳು ಸತ್ತು ಬಿದ್ದಿದ್ದವು. ಯಲ್ಲಾಪುರ ಹಾಗೂ ಮಂಚಿಕೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವ ಮೇಲೆತ್ತಿದರು. ಸಾವಿನ ಸುದ್ದಿ ಕೇಳಿ ನೂರಾರು ಜನ ಕೆರೆ ಕಡೆ ಜಮಾಯಿಸಿದರು. ಆದರೆ, ಶವ ಕೊಳೆತಿದ್ದರಿಂದ ಅಲ್ಲಿದ್ದವರು ವಾಸನೆ ಸಹಿಸಲಾಗದೇ ಮೂಗು ಮುಚ್ಚಿಕೊಂಡರು.







