ಉತ್ತರ ಕನ್ನಡ ಜಿಲ್ಲೆಯ ವಾತಾವರಣದಲ್ಲಿ ಈಚೆಗೆ ಸಾಕಷ್ಟು ಬದಲಾವಣೆಗಳಾಗಿದೆ. ನಿತ್ಯ ಬೆಳಗ್ಗೆ 11 ಗಂಟೆ ನಂತರದ ಉಷ್ಣತೆಗೆ ಜನ ತತ್ತರಿಸಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೂ ಭಾರೀ ಪ್ರಮಾಣದ ಬಿಸಿಲು ಬರುತ್ತಿದ್ದು, ಕರಾವಳಿ ಭಾಗದ ಬಹುತೇಕರಿಗೆ ಮನೆಯಿಂದ ಹೊರಬರುವುದೇ ಸಮಸ್ಯೆಯಾಗಿದೆ!
`ಕೆಲವು ದಿನಗಳಿಂದ ಜಿಲ್ಲೆಯ ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣತೆಯ ವಾತಾವರಣ ಕಂಡು ಬರುತ್ತಿದೆ. ಇದರಿಂದ ಉಂಟಾಗುವ ಉಷ್ಣ ಗಾಳಿಯ ಪರಿಣಾಮದಿಂದ ಅನಾರೋಗ್ಯಕ್ಕೆ ಒಳಗಾಗುವವರ ಸಾಧ್ಯತೆ ಹೆಚ್ಚಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆಯಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳಿ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚಿಸಿದರು.
`ಬಿಸಿ ಗಾಳಿಯ ಪರಿಣಾಮ ಹೀಟ್ ವೇವ್ ಸ್ಟೊಕ್’ನಿಂದ ಬಳಲುವವರಿಗೆ ತಕ್ಷಣದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ, ತಾಲೂಕು ಮತ್ತು ಸಮುದಾಯ ಆಸ್ಪತ್ರೆಗಳಲ್ಲಿ ಅಗತ್ಯ ಸಂಖ್ಯೆಯ ಹಾಸಿಗೆಗಳನ್ನು ಮೀಸಲಿಡಬೇಕು. ಚಿಕಿತ್ಸಾ ಕೊಠಡಿಯಲ್ಲಿ ತಂಪು ವಾತಾವರಣ ಇರುವಂತೆ ಕೂಲರ್, ಫ್ಯಾನ್ ಅಳವಡಿಸಬೇಕು’ ಎಂದು ಸೂಚಿಸಿದರು. `ಹೀಟ್ ವೇವ್ ಸಂದರ್ಭದಲ್ಲಿ ಹೊರಾಂಗಣದಲ್ಲಿ ಯಾವುದೇ ಬೇಸಿಗೆ ಶಿಬಿರ, ಎನ್ಸಿಸಿ, ಎನ್ಎಸ್ಎಸ್ ಶಿಬಿರಗಳ ಚಟುವಟಿಕೆಗಳನ್ನು ನಡೆಸಬಾರದು. ಬಿಸಿ ಗಾಳಿಯ ಪರಿಣಾಮಗಳ ಕುರಿತಂತೆ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.
`ಸಾರ್ವಜನಿಕರು ಹೊರಗಡೆ ಓಡಾಡುವಾಗ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಟೋಪಿಗಳನ್ನು ಧರಿಸುವುದು ಉತ್ತಮ. ಛತ್ರಿಗಳನ್ನು ಬಳಸಿದರೂ ಸಮಸ್ಯೆಯಿಲ್ಲ. ಜೊತೆಗೆ ಸಾದ್ಯವಾದಷ್ಟು ಮಧ್ಯಾಹ್ನದ ಸಮಯದಲ್ಲಿ ಹೊರಗಡೆ ಓಡಾಡುವುದನ್ನು ಕಡಿಮೆಗೊಳಿಸಬೇಕು’ ಎಂದು ಕರೆ ನೀಡಿದರು. `ಬಿಸಿಲಿನಲ್ಲಿ ಶ್ರಮದಾಯಕ ಕೆಲಸಗಳನ್ನು ಮಾಡಬಾರದು. ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಆಗಾಗ ನೀರು ಕುಡಿಯುವ ಮೂಲಕ ಎಲ್ಲರೂ ದೇಹವು ನಿರ್ಜಲೀಕರಣವಾದಂತೆ ಎಚ್ಚರವಹಿಸಬೇಕು’ ಎಂದು ಕರೆ ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನೀರಜ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ ಮೋಹನ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಅರ್ಚನಾ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ ರಮೇಶ್ ರಾವ್, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ ನಟರಾಜ್ ಇತರರಿದ್ದರು.