ಆರು ತಿಂಗಳ ಹಿಂದೆ ಪತ್ನಿ ಪೀಡಿಸಿದ ಈಶ್ವರ ನಾಯ್ಕರಿಗೆ ವೆಂಕಟೇಶ ನಾಯ್ಕರು ಎಚ್ಚರಿಕೆ ನೀಡಿದ್ದು, ಅದೇ ದ್ವೇಷದಲ್ಲಿದ್ದ ಈಶ್ವರ ನಾಯ್ಕ ಬಿಯರ್ ಬಾಟಲಿಯಿಂದ ವೆಂಕಟೇಶ ನಾಯ್ಕರ ತಲೆಗೆ ಹೊಡೆದಿದ್ದಾರೆ. ಇದರಿಂದ ಬಿಯರ್ ಬಾಟಲಿ ಒಡೆದಿದ್ದು, ವೆಂಕಟೇಶ ನಾಯ್ಕರ ತಲೆ ಜೊತೆ ಹಣೆಗೂ ಪೆಟ್ಟಾಗಿದೆ.
ಭಟ್ಕಳದ ಬೈಲೂರು ಗಣಪಯ್ಯನಮನೆ ದೊಡ್ಡಬೆಲಸೆಯ ವೆಂಕಟೇಶ ನಾಯ್ಕರು ವಾಸವಾಗಿದ್ದಾರೆ. ದೊಡ್ಡಬೆಲಸೆಯ ಈಶ್ವರ ನಾಯ್ಕ ಆರು ತಿಂಗಳ ಹಿಂದೆ ವೆಂಕಟೇಶ ನಾಯ್ಕರ ಪತ್ನಿ ಬೇಬಿ ಅವರಿಗೆ ಕಾಟ ಕೊಟ್ಟಿದ್ದರು. ಪತ್ನಿಯನ್ನು ಕೂಗಿ ಕರೆದ ಕಾರಣ ವೆಂಕಟೇಶ ನಾಯ್ಕರು ಈಶ್ವರ ನಾಯ್ಕರಿಗೆ ಅದೇ ದಿನ ಎಚ್ಚರಿಕೆ ನೀಡಿ, ಸುಮ್ಮನೆ ಬಿಟ್ಟಿದ್ದರು.
ಆ ದಿನ ಸುಮ್ಮನೆ ಹೋಗಿದ್ದ ಈಶ್ವರ ನಾಯ್ಕ ಅವರು ವೆಂಕಟೇಶ ನಾಯ್ಕರ ವಿರುದ್ಧ ಕಿಡಿಕಾರುತ್ತಿದ್ದರು. ದ್ವೇಷ ಭಾವನೆಯಲ್ಲಿದ್ದ ಈಶ್ವರ ನಾಯ್ಕ ವೆಂಕಟೇಶ ನಾಯ್ಕರನ್ನು ಗುರಾಯಿಸಿ ನೋಡುವುದು ಸಾಮಾನ್ಯವಾಗಿತ್ತು. ಮಾರ್ಚ 17ರಂದು ವೆಂಕಟೇಶ ನಾಯ್ಕರು ಮಾರುಕಟ್ಟೆ ಹೋಗಲು ಸಿದ್ಧವಾಗಿದ್ದರು. ದೊಡ್ಡ ಬೆಲಸೆ ರಸ್ತೆಯಲ್ಲಿ ನಿಂತ ಅವರಿಗೆ ಈಶ್ವರ ನಾಯ್ಕರು ಎದುರಾದರು.
ಗುರಾಯಿಸಿ ನೋಡುತ್ತಿದ್ದ ಈಶ್ವರ ನಾಯ್ಕರನ್ನು ವೆಂಕಟೇಶ ನಾಯ್ಕರು ಮಾತನಾಡಿಸಿದರು. `ಏಕೆ ಹಾಗೇ ಗುರಾಯಿಸುವೆ?’ ಎಂದು ವೆಂಕಟೇಶ ನಾಯ್ಕರು ಪ್ರಶ್ನಿಸಿದ್ದರು. `ನನ್ನ ಕಣ್ಣು ನನ್ನ ಇಷ್ಟ. ನಿನಗೇನು ಸಮಸ್ಯೆ?’ ಎಂದು ಈಶ್ವರ ನಾಯ್ಕ ಎದುರುತ್ತರ ನೀಡಿದ್ದರು. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದ್ದು, ಕೆಟ್ಟದಾಗಿ ಬೈದ ಈಶ್ವರ ನಾಯ್ಕರು ರಸ್ತೆಯ ಅಂಚಿನಲ್ಲಿ ಬಿದ್ದಿದ್ದ ಹಸಿರು ಬಣ್ಣದ ಬಿಯರ್ ಬಾಟಲಿಯಿಂದ ವೆಂಕಟೇಶ ನಾಯ್ಕರಿಗೆ ಹೊಡೆದರು.
ಇದರಿಂದ ವೆಂಕಟೇಶ ನಾಯ್ಕರ ತಲೆಗೆ ಗಾಯವಾಯಿತು. ಹಣೆಗೆ ಸಹ ಪೆಟ್ಟಾಯಿತು. `ಮತ್ತೊಮ್ಮೆ ತಂಟೆಗೆ ಬಂದರೆ ಕೊಲೆ ಮಾಡುವೆ’ ಎಂದು ಬೆದರಿಸಿ ಈಶ್ವರ ನಾಯ್ಕರು ಅಲ್ಲಿಂದ ಹೊರಟರು. ಅದಾದ ನಂತರ ವೆಂಕಟೇಶ ನಾಯ್ಕರು ಮುರುಡೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.







