ಹಳಿಯಾಳದ ಮಂಜುನಾಥ ಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಚ್ಚಲು ಮನೆಯಲ್ಲಿ ನೇಣು ಹಾಕಿಕೊಂಡು ಅವರು ಸಾವನಪ್ಪಿದ್ದಾರೆ.
ಹಳಿಯಾಳದ ಸದಾಶಿವನಗರದಲ್ಲಿ ಮಂಜುನಾಥ ಗೌಡ (35) ವಾಸಿಸುತ್ತಿದ್ದರು. ಮನೆ ಮನೆಗೆ ತೆರಳಿ ವಿದ್ಯುತ್ ಮೀಟರ್ ಓದಿ ಬಿಲ್ ಕೊಡುವುದು ಅವರ ಕಾಯಕವಾಗಿತ್ತು. ಈಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಅದೇ ಬೇಸರದಲ್ಲಿರುತ್ತಿದ್ದರು.
ಆರೋಗ್ಯ ವಿಷಯವಾಗಿ ಸಾಕಷ್ಟು ತಲೆಕೆಡಿಸಿಕೊಂಡಿದ್ದ ಅವರು ವಿವಿಧ ಆಸ್ಪತ್ರೆಗೆ ತೆರಳಿದರೂ ಕ್ಷೇಮವಾಗಿರಲಿಲ್ಲ. ಹೀಗಾಗಿ ಮಾರ್ಚ 25ರ ಬೆಳಗ್ಗೆ 11 ಗಂಟೆ ವೇಳೆಗೆ ಬಚ್ಚಲು ಮನೆಗೆ ಹೋದ ಅವರು ಅಲ್ಲಿಯೇ ಆತ್ಮಹತ್ಯೆಗೆ ಶರಣಾದರು.
ಅಲ್ಲಿದ್ದ ಮರದ ಎಳೆಗೆ ವೇಲು ಸಿಕ್ಕಿಸಿ ಅದನ್ನು ಕುಣಿಕೆಯನ್ನಾಗಿಸಿಕೊಂಡು ನೇಣು ಹಾಕಿಕೊಂಡರು. ದುಡಿಯುವ ಮಗನನ್ನು ಕಳೆದುಕೊಂಡ 64ರ ವೃದ್ಧೆ ಬಸವಣ್ಣನಮ್ಮ ಕಣ್ಣೀರು ಹಾಕುತ್ತ ಮಗನ ಸಾವಿನ ಬಗ್ಗೆ ವಿವರಣೆ ನೀಡಿದರು. ಪೊಲೀಸರು ಮಾಹಿತಿಪಡೆದು ಪ್ರಕರಣ ದಾಖಲಿಸಿಕೊಂಡರು.







