ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಸಂಭ್ರಮ-ಸಡಗರ ಕಾಣಿಸಿತು. ಇದಕ್ಕೆ ಕಾರಣ ಅಲ್ಲಿ ನಡೆದ ಜಾನಪದ ಉತ್ಸವ!
ಜಾನಪದ ಸಾಹಿತ್ಯದ ಹಲವು ಪ್ರಕಾರಗಳು ಇಲ್ಲಿ ಪ್ರಜ್ವಲಿಸಿದವು. ಕಥೆ, ಕಥನ ಕಾವ್ಯ, ಒಗಟು, ಗಾದೆ, ಲಾವಣಿ, ಜೋಗಿಪದ, ಗೀಗಿಪದ ಬೊಂಬೆಯಾಟ, ಶಿಲ್ಪ ಕಲೆ, ವ್ಯಕ್ತಿಚಿತ್ರಗಳು, ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಕರಡಿ ಮಜಲು, ದೊಡ್ಡಾಟ-ಸಣ್ಣಾಟ-ಬಯಲಾಟದಂಥ ಯಕ್ಷಗಾನದಲ್ಲಿಯೂ ಕಾಲೇಜಿನ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡರು. ಜಾನಪದ ಶೈಲಿಯ ಉತ್ತರ ಕರ್ನಾಟಕದ ಭೋಜನ ಸಹ ನೆರೆದಿದ್ದವರ ಮನ ಗೆದ್ದವು. ಬಾಗಿಲಿಗೆ ಹಾಕಿದ ತೋರಣ, ಮಕ್ಕಳ ಮನರಂಜಾ ಕಾರ್ಯಕ್ರಮಗಳು ನೆರೆದಿದ್ದವರ ಮನಸೂರೆಗೊಳಿಸಿದವು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಕಾರ್ಯದರ್ಶಿ ಗಣೇಶ ಬೀಷ್ಠಣ್ಣನವರ್ `ಜನಪದ ತಲೆಮಾರಿನ ಮೂಲಕ ನಮ್ಮ ನಾಡೋಜರ ಕಥೆ ಹೇಳಲು ಹೋರಟಿರುವದೇ ಜನಪದ ಉತ್ಸವ’ ಎಂದು ಅಭಿಪ್ರಾಯಪಟ್ಟರು. ಆಧುನಿಕತೆಯಲ್ಲಿ ಜನಪದ ಹಿರಿಮೆ, ಗರಿಮೆ ಹಾಗೂ ಮಹಿಮೆ ಮರೆಯುತ್ತಿದ್ದೇವೆ. ಅದಾಗಿಯೂ, ಹಳ್ಳಿ ಹಳ್ಳಿಗಳಲ್ಲಿ ಇಂದಿಗೂ ಸರಳ ಶೈಲಿಯಲ್ಲಿ ರಚಿತವಾಗಿರುವ ವಾಚಕ ಸಾಹಿತ್ಯ ಸಜೀವವಾಗಿದೆ. ಜಾನಪದ ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ’ ಎಂದವರು ಹೇಳಿದರು.

ಕಾಲೇಜಿನ ಪ್ರಾಚಾರ್ಯೆ ಗೀತಾ.ವಾಲಿಕಾರ ಮಾತನಾಡಿ, `ಶಿಷ್ಟ ಸಾಹಿತ್ಯ ಸಂಪದ್ಭರಿತವಾಗಲು ಜನಪದ ಸಾಹಿತ್ಯ ಮೂಲ ಪ್ರೇರಣೆ. ಪೂರ್ವಜರು ಬದುಕಿನ ಸುಖ-ದುಃಖ, ಸರಸ-ವಿರಸ, ಪ್ರೀತಿ-ವಾತ್ಸಲ್ಯ, ಆಸರಿಕೆ-ಬೇಸರಿಕೆಗಳ ಅನುಭವಗಳನ್ನು ಹಾಡು-ಕಥೆಗಳ ಮೂಲಕ ಪ್ರಸ್ತುತಪಡಿಸಿದ್ದು ಸದಾ ಹಸಿರಾಗಿರುತ್ತದೆ’ ಎಂದರು.
ಕಾಲೇಜು ಸಂಘದ ಅಧ್ಯಕ್ಷೆ ಗೀತಾ ತಳವಾರ ಹಾಗೂ ಐಕ್ಯೂಎಸಿ ಸಂಯೋಜಕ ಮೋಹ್ಮದ ಫಯಾಜ್ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿಒ ಸಲ್ಮಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಧ್ಯಾಪಕ ಡಿ ಎಸ್ ದೊಡ್ಡಮನಿ ಪರಿಚಯಿಸಿದರು. ಪ್ರಾಧ್ಯಾಪಕಿ ವನಿತಾ ದೇಶಭಂಡಾರಿ ನಿರೂಪಿಸಿದರು. ಕಲಾ ಸಂಘದ ಸಂಯೋಜಕರಾದ ದೀಪ್ತಿ ನಾಯ್ಕ ವಂದಿಸಿದರು.







