ಶಿರಸಿಯ ಸೋಂದಾ ಬಳಿ ಅಡಿಕೆ ತೋಟಕ್ಕೆ ಸೊಪ್ಪು ಕಡಿಯಲು ಹೋಗಿದ್ದ ಕಾರ್ಮಿಕ ಮರದಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಆಸ್ಪತ್ರೆಗೆ ಕರೆತಂದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸೋಂದಾ ಬಳಿಯ ಕುಮಟಗೇರಿ ಅಶೋಕ ಚೆನ್ನಯ್ಯ (43) ಅವರು ಮರ ಏರುವುದರಲ್ಲಿ ಸಾಕಷ್ಟು ನೈಪುಣ್ಯತೆ ಹೊಂದಿದ್ದರು. ತೋಟಕ್ಕೆ ಸೊಪ್ಪು ಹೊದೆಸುವುದು, ಸೊಪ್ಪು ಕಡಿಯುವುದು ಸೇರಿ ವಿವಿಧ ಕೆಲಸವನ್ನು ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಅದರ ಪ್ರಕಾರ ಮಾರ್ಚ 26ರಂದು ಅಶೋಕ ಚೆನ್ನಯ್ಯ ಅವರು ಸೋಂದಾ ಗ್ರಾಮದ ವೆಂಕಟ್ರಮಣ ಜೋಶಿ ಅವರ ತೋಟದ ಕೆಲಸಕ್ಕೆ ಹೋಗಿದ್ದರು.
ತೋಟಕ್ಕೆ ಸೊಪ್ಪು ಹಾಕುವ ಕೆಲಸ ಮಾಡಿಕೊಡುವುದಾಗಿ ಮಾತು ಕೊಟ್ಟಿದ್ದ ಅವರು ಬೆಳಗ್ಗೆಯಿಂದ ಮರದ ಮೇಲೆ ಇದ್ದರು. 10.30ರ ಆಸುಪಾಸಿಗೆ ಕಾಡು ಜಾತಿಯ ಮರವೊಂದನ್ನು ಅವರು ಏರಿದ್ದು, ಸೊಪ್ಪು ಕಟಾವು ಮಾಡುತ್ತಿರುವಾಗ ಕಾಲು ಜಾರಿ ಕೆಳಗೆ ಬಿದ್ದರು. ಇದನ್ನು ನೋಡಿದ ಇತರರು ಖಾಸಗಿ ವಾಹನದಲ್ಲಿ ಅವರನ್ನು ಟಿಎಸ್ಎಸ್ ಆಸ್ಪತ್ರೆಗೆ ಸಾಗಿಸಿದರು.
ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು `ಅಶೋಕ ಚೆನ್ನಯ್ಯ ಇನ್ನಿಲ್ಲ’ ಎಂದು ಘೋಷಿಸಿದರು. ಯಡಳ್ಳಿ ಗಿಡಮಾವಿನಕಟ್ಟಾದ ವಿನಯ ಚೆನ್ನಯ್ಯಾ ಅವರು ಬಾವನ ಸಾವಿನ ಸುದ್ದಿಯನ್ನು ಪೊಲೀಸರಿಗೆ ಮುಟ್ಟಿಸಿದರು. ನಡೆದ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.






