2024ರಲ್ಲಿ ನಡೆದ ಕದಂಬ ಉತ್ಸವಕ್ಕೆ ಕಲಾವಿದರನ್ನು ಕರೆತಂದೆ `ರಾಜ್ ಇವೆಂಟ್ಸ್’ ಕಂಪನಿಗೆ ಈವರೆಗೂ ಜಿಲ್ಲಾಡಳಿತ ಹಣ ಪಾವತಿ ಮಾಡಿಲ್ಲ. ಒಟ್ಟು 36 ಲಕ್ಷ ರೂ ಬಾಕಿಯಿರುವ ಬಗ್ಗೆ ರಾಜ್ ಇವೆಂಟ್ಸ್ ಮಾಲಕ ಸಿದ್ದರಾಜು ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷದ ಕದಂಬ ಉತ್ಸವಕ್ಕೆ ಹರಿಕೃಷ್ಣ ಹಾಗೂ ರಘುದಿಕ್ಷಿತ್ ಅವರನ್ನು ಕರೆಯಿಸಲಾಗಿತ್ತು. ಅವರನ್ನು ಕರೆತರುವ ಜವಾಬ್ದಾರಿಯನ್ನು ರಾಜ್ ಇವೆಂಟ್ಸ್’ಗೆ ಒಪ್ಪಿಸಲಾಗಿತ್ತು. ಟೆಂಡರ್ ಮೂಲಕ ಈ ಕೆಲಸ ಪಡೆದಿದ್ದ ರಾಜ್ ಇವೆಂಟ್ಸ್’ಗೆ ಕಲಾವಿದರ ಸಂಭಾವನೆ, ಅವರ ಆತಿಥ್ಯ ಸೇರಿ ಎಲ್ಲಾ ಹೊಣೆವಹಿಸಲಾಗಿತ್ತು. ಆದರೆ, ಕಂದಬ ಉತ್ಸವ ಮುಗಿದು ವರ್ಷ ಕಳೆದರೂ ರಾಜ್ ಇವೆಂಟ್ಸ್’ಗೆ ಹಣ ಪಾವತಿ ಆಗಿಲ್ಲ.
`ಈ ಬಗ್ಗೆ 15ಕ್ಕೂ ಅಧಿಕ ಬಾರಿ ವಿವಿಧ ಕಚೇರಿಗೆ ಅಲೆದಾಟ ನಡೆಸಿದರೂ ಹಣ ಪಾವತಿ ಆಗಿಲ್ಲ. ಜಿಎಸ್ಟಿ ಸಹ ಸಿಕ್ಕಿಲ್ಲ’ ಎಂದು ರಾಜ್ ಇವೆಂಟ್ಸ್ ಮಾಲಕ ಸಿದ್ದರಾಜು ಹೇಳಿದ್ದಾರೆ. `ವರ್ಕ ಆರ್ಡರ್ ಇಲ್ಲ’ ಎಂಬ ಕಾರಣ ನೀಡಿ ಬಿಲ್ ತಡೆಹಿಡಿಯಲಾಗಿದೆ. ಆದರೆ, ತಾನು ವರ್ಕ ಆರ್ಡರ್ ಜೊತೆಯಲ್ಲಿಯೇ ಬಿಲ್ ನೀಡಿದ್ದೇನೆ’ ಎಂದು ಸಿದ್ದರಾಜು ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಕದಂಬ ಉತ್ಸವಕ್ಕೆ ಬಂದ ಹಣದ ಪೈಕಿ 1.5 ಕೋಟಿ ರೂ ಸರ್ಕಾರಕ್ಕೆ ಮರಳಿದೆ. ಅದಾಗಿಯೂ ಸಿದ್ದರಾಜು ಅವರ ಹಣ ಪಾವತಿ ಬಾಕಿ ಉಳಿದುಕೊಂಡಿದೆ.






