ಯಲ್ಲಾಪುರದ ಹುಟಕಮನೆ ಗ್ರಾಮದಲ್ಲಿ ಗುಡ್ಡ ಕಟಾವು ಮಾಡಿದ ಬಗ್ಗೆ ದೂರು ಸ್ವೀಕರಿಸಿದ ಅಧಿಕಾರಿಗಳು ಬುಧವಾರ ರಾತ್ರಿಯೇ ಅಲ್ಲಿ ದೌಡಾಯಿಸಿದ್ದಾರೆ. ಕಂದಾಯ, ಅರಣ್ಯ, ಹೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮಾಲ್ಕಿ ಪ್ರದೇಶದಲ್ಲಿ ಗುಡ್ಡ ಕಟಾವು ಮಾಡಿದ್ದರೂ ರಸ್ತೆಗಾಗಿ ಅರಣ್ಯ ಪ್ರದೇಶ ಬಳಸಿದ ಕಾರಣ ಅರಣ್ಯ ಅಧಿಕಾರಿಗಳು ಎರಡು ಜೆಸಿಬಿ ಯಂತ್ರಗಳನ್ನು ವಶಕ್ಕೆಪಡೆದಿದ್ದಾರೆ. ಗುಡ್ಡ ಕಟಾವು ವೇಳೆ ವಿದ್ಯುತ್ ಕಂಬಗಳನ್ನು ನೆಲಕ್ಕೆ ಉರುಳಿಸಿದ ಕಾರಣ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.
ಭಾರೀ ಪ್ರಮಾಣದಲ್ಲಿ ಗುಡ್ಡ ಕಟಾವು ನಡೆಸಿದ್ದರಿಂದ ಭೂ ಕುಸಿತ ಉಂಟಾದ ಬಗ್ಗೆ ದೂರು ಸಲ್ಲಿಕೆಯಾಗಿತ್ತು. ಮಾಲ್ಕಿ ಕ್ಷೇತ್ರದ ಜೊತೆ ಅರಣ್ಯ ಭೂಮಿಯನ್ನು ಅತಿಕ್ರಮಿಸಿ ಗುಡ್ಡ ಕೊರೆದ ತಹಶೀಲ್ದಾರ್ ಕಚೇರಿಯ ಮೂಲಕ ಬಾಳಗಿಮನೆಯ ಮಂಜುನಾಥ ಹೆಗಡೆ, ಶಮಶುದ್ದೀನ ಮಾರಕರ ಹಾಗೂ ಪ್ರೇಮಾನಂದ ನಾಯ್ಕ ಎಂಬಾತರು ತಕರಾರು ಅರ್ಜಿ ಸಲ್ಲಿಸಿದ್ದರು.
ಯಲ್ಲಾಪುರ ತಾಲೂಕಿನ ಹುಟಕಮನೆ ಗ್ರಾಮದ ಸರ್ವೇ ನಂ 61/6 ಖಾಸಗಿ ಮಾಲಿಕತ್ವದ ಕ್ಷೇತ್ರವಾಗಿದೆ. ಈ ಪ್ರದೇಶದಲ್ಲಿಯೇ ಗುಡ್ಡ ಕಟಾವು ನಡೆದಿದೆ. ಆದರೆ, ಕ್ಷೇತ್ರಕ್ಕೆ ತೆರಳಲು ಹೊಸದಾಗಿ ರಸ್ತೆ ಮಾಡಲಾಗಿದ್ದು, ಆ ಪ್ರದೇಶ ಅರಣ್ಯದಿಂದ ಕೂಡಿದೆ. ಕ್ಷೇತ್ರದ ಗಡಿ ಗುರುತು ಇಲ್ಲದೇ ಗುಡ್ಡ ಕಟಾವು ನಡೆದಿರುವುದು, ಅಲ್ಲಿದ್ದ ಮಣ್ಣನ್ನು ಕಾನೂನುಬಾಹಿರವಾಗಿ ಸಾಗಿಸಿರುವ ಬಗ್ಗೆ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿದೆ.







