ಹೊನ್ನಾವರ ಬಳಿಯ ರಾಮತೀರ್ಥ ಬಸ್ ನಿಲ್ದಾಣ ಪಡ್ಡೆ ಹುಡುಗರು ಹಾಗೂ ಮದ್ಯ ವ್ಯಸನಿಗಳಿಗೆ ಆಶ್ರಯತಾಣವಾಗಿ ಬದಲಾಗಿದೆ. ಸಂಪ್ರದಾಯಸ್ತ ಕುಟುಂಬದವರು ಇಲ್ಲಿ ತೆರಳಲು ಮುಜುಗರ ಅನುಭವಿಸುವ ಸ್ಥಿತಿ ಎದುರಾಗಿದೆ.
ಬಸ್ ನಿಲ್ದಾಣದ ಒಳಭಾಗ ಹಾಗೂ ಸುತ್ತಲಿನ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಸರಾಯಿ ಬಾಟಲಿಗಳನ್ನು ಒಡೆಯಲಾಗಿದೆ. ಪರಿಸರ ಮಾಲಿನ್ಯದ ಜೊತೆ ಇದು ಅಪಾಯವನ್ನು ಸೃಷ್ಠಿಸಿದೆ. ಬಸ್ ನಿಲ್ದಾಣದ ಅವ್ಯವಸ್ಥೆ, ಅಧಿಕಾರಿಗಳ ಬೇಜವಬ್ದಾರಿಯ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಗಮನ ಸೆಳೆದಿದ್ದಾರೆ. ಪ್ರವಾಸಿ ಕ್ಷೇತ್ರವಾದ ರಾಮತೀರ್ಥದಲ್ಲಿ ಮಾಲಿನ್ಯಕ್ಕೆ ಅವಕಾಶ ಕೊಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
`ಸ್ವಚ್ಛತೆ ಕಾಪಾಡುವುದಕ್ಕಾಗಿ ಸ್ಥಳೀಯ ಆಡಳಿತಕ್ಕೆ ಸರ್ಕಾರ ಸ್ವಚ್ಛ ವಾಹಿನಿ ನೀಡಿದೆ. ಅಕ್ರಮ ತಡೆಗೆ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಜಾರಿ ಮಾಡಿದೆ. ಅದಾಗಿಯೂ ರಾಮತೀರ್ಥದಲ್ಲಿ ಅಕ್ರಮ ಚಟುವಟಿಕೆಗಳ ಮೂಲಕ ಪರಿಸರ ಹಾಳಾಗುತ್ತಿದೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹೇಳಿದ್ದಾರೆ. `ಪೊಲೀಸರು ಹಾಗೂ ಸ್ಥಳೀಯ ಆಡಳಿತದವರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಇಲ್ಲವಾದಲ್ಲಿ ಅಶುಚಿತ್ವ ಹಾಗೂ ಅಕ್ರಮ ಚಟುವಟಿಕೆ ವಿರುದ್ಧ ದೂರು ನೀಡುವುದು ಅನಿವಾರ್ಯ’ ಎಂದು ಅವರು ಎಚ್ಚರಿಸಿದ್ದಾರೆ.

ಬಸ್ ನಿಲ್ದಾಣದ ಮಾಲಿನ್ಯದ ಬಗ್ಗೆ ಆ ಊರಿನ ಎಸ್ ಐ ಹೆಗಡೆ ಹಾಗೂ ಸುಬ್ರಾಯ ಭಟ್ ಸಹ ಅಸಮಧಾನವ್ಯಕ್ತಪಡಿಸಿದ್ದಾರೆ. `ಸ್ವಚ್ಛತೆ ಇಲ್ಲದಿರುವುದು ಹಾಗೂ ಭಯದ ವಾತಾವರಣದ ಕಾರಣ ಇಲ್ಲಿ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದಾರೆ’ ಎಂದವರು ವಿವರಿಸಿದ್ದಾರೆ.







