ಮುರುಡೇಶ್ವರದ ಗೌರೀಶ ನಾಯ್ಕ ಅವರ ಮೇಲೆ ಏಳಕ್ಕೂ ಅಧಿಕ ಜನ ಆಕ್ರಮಣ ನಡೆಸಿದ್ದಾರೆ. ಮಾರಕಾಸ್ತ್ರಗಳನ್ನು ಹಿಡಿದು ಬಂದ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಗೌರೀಶ ನಾಯ್ಕ ತಮ್ಮ ಜೀವ ಉಳಿಸಿಕೊಂಡಿದ್ದು, ರಕ್ಷಣೆಗಾಗಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.
ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿಯ ಮಾವಳ್ಳಿ-2 ಕನ್ನಡ ಶಾಲೆ ಬಳಿ ಗೌರೀಶ ನಾಯ್ಕ (26) ವಾಸವಾಗಿದ್ದಾರೆ. ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದಾರೆ. ಮಾರ್ಚ 31ರ ಸಂಜೆ 4 ಗಂಟೆ ಆಸುಪಾಸಿಗೆ ಗೌರೀಶ ನಾಯ್ಕ ಅವರು ಮುಟ್ಟಳ್ಳಿಗೆ ತೆರಳಿದ್ದರು. ಆಗ, ಅಲ್ಲಿ ಎದುರಾದ ಮುರುಡೇಶ್ವರದ ಜಯಂತ ನಾಯ್ಕ ಜೊತೆ ಗೌರೀಶ ನಾಯ್ಕರಿಗೆ ಜಗಳವಾಯಿತು.
ಅಲ್ಲಿದ್ದ ಜನ ಆ ಜಗಳ ತಪ್ಪಿಸಿ ಇಬ್ಬರಿಗೂ ಸಮಾಧಾನ ಮಾಡಿದರು. `ಮತ್ತೆ ಜಗಳ ಮಾಡಬೇಡಿ’ ಎಂದು ಬುದ್ದಿ ಹೇಳಿ ಕಳುಹಿಸಿದರು. ಅದಾದ ನಂತರ ಗೌರೀಶ ನಾಯ್ಕ ಮನೆಗೆ ಮರಳಿದ್ದು, ರಾತ್ರಿ ಮುರುಡೇಶ್ವರದ ಕನ್ನಡ ಶಾಲೆ ಬಳಿ ತೆರಳಿದ್ದರು. ಆಗ, ಅಲ್ಲಿಗೆ ಬಂದ ಜಯಂತ ನಾಯ್ಕ ಮತ್ತೆ ಜಗಳ ಶುರು ಮಾಡಿದರು. ಜಯಂತ ನಾಯ್ಕರ ಭಾವ ಮಿಥುನ್ ನಾಯ್ಕ ಸಹ ಜೋರಾಗಿ ಮಾತನಾಡಿದರು.
ಜಯಂತ ನಾಯ್ಕ ಜೊತೆ ಮುರುಡೇಶ್ವರದ ಸಂದೇಶ ದೇವಾಡಿಗ, ದಿಲೀಪ ಮೊಗೇರ್, ಆನಂದ ಮೊಗೇರ, ಲೋಹಿತ ಮೊಗೇರ ಇದ್ದರು. ಭಟ್ಕಳದ ಮಿಥುನ್ ನಾಯ್ಕ ಹಾಗೂ ಭಟ್ಕಳ ಕಾರಗದ್ದೆಯ ಬಾಬು ನಾಯ್ಕ ಇತರರು ಗೌರೀಶ ನಾಯ್ಕರನ್ನು ಅಡ್ಡಗಟ್ಟಿದರು. ಎಲ್ಲರೂ ಸೇರಿ ಮಾರಕಾಸ್ತçಗಳಿಂದ ಹೊಡೆಯಲು ಶುರು ಮಾಡಿದರು. ಅವರಿಂದ ತಪ್ಪಿಸಿಕೊಂಡ ಗೌರೀಶ ನಾಯ್ಕ ಪೊಲೀಸ್ ಠಾಣೆಗೆ ತೆರಳಿ ಆಶ್ರಯಪಡೆದರು. ಅದಾಗಿಯೂ, ಗೌರೀಶ ನಾಯ್ಕರಿಗೆ ಜಯಂತ್ ನಾಯ್ಕ ಅವರು ನೀಡಿದ ಏಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ತನ್ನ ಮೇಲೆ ನಡೆದ ಹಲ್ಲೆ ಹಾಗೂ ಹಲ್ಲೆ ಪ್ರಯತ್ನದ ಬಗ್ಗೆ ಗೌರೀಶ ನಾಯ್ಕ ಮುರುಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದರು. ದಾಳಿಕೋರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ದಾಖಲಿಸಿದರು.







