ಯಶೋಧರ ಟ್ರಸ್ಟ್ ಅಧ್ಯಕ್ಷ ಯಶೋಧರ ನಾಯ್ಕ ಅವರು ತಮ್ಮ ಸಂಸ್ಥೆಯ ಮಹಿಳಾ ಉದ್ಯೋಗಿಗೆ ಲೈಂಗಿಕ ಹಿಂಸೆ ನೀಡಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ. `ತನ್ನೊಂದಿಗೆ ಸಹಕರಿಸದೇ ಇದ್ದರೆ ಕೆಲಸದಿಂದ ತೆಗೆಯುವೆ’ ಎಂದು ಬೆದರಿಸಿ ಹಿಂಸಿಸಿದ ಬಗ್ಗೆ 23 ವರ್ಷದ ಮಹಿಳೆ ಪೊಲೀಸ್ ದೂರು ನೀಡಿದ್ದಾರೆ.
ಕೆಲ ತಿಂಗಳ ಹಿಂದೆ ಯಶೋಧರ ನಾಯ್ಕ ಅವರು ಶಿರಸಿ ಇಂದಿರಾನಗರದ ಮುಸ್ಕಾನ್ ಮುಕಂದರ್ 15 ಲಕ್ಷ ರೂ ವಂಚಿಸಿದ ಬಗ್ಗೆ ಹಾಗೂ 25 ಲಕ್ಷ ರೂಪಾಯಿಗೆ ಬ್ಲಾಕ್ಮೇಲ್ ಮಾಡಿದ ಬಗ್ಗೆ ದೂರು ನೀಡಿದ್ದರು. ಇದೀಗ ಅದೇ ಮುಸ್ಕಾನ್ ಮುಕಂದರ್ ಅವರು ಯಶೋಧರ ನಾಯ್ಕ ಅವರು `ತನ್ನ ಮೈ ಮುಟ್ಟಿದ್ದಾರೆ. ಕೆಲಸ ಉಳಿಸಿಕೊಳ್ಳಬೇಕಾದರೆ ಮಂಜಕ್ಕೆ ಬಾ ಎಂದು ಕರೆದಿದ್ದಾರೆ’ ಎಂದು ದೂರಿದ್ದಾರೆ.
ಯಶೋಧರ ನಾಯ್ಕ ಅವರು ಕಾಂಗ್ರೆಸ್ ಮುಖಂಡ, ಉದ್ಯಮಿ, ಸಾಮಾಜಿಕ ಹೋರಾಟಗಾರ. 61 ವರ್ಷದ ಯಶೋಧರ ನಾಯ್ಕ ಅವರು `ತನಗೆ ವಯಸ್ಸಾದರೂ ಮಾತ್ರೆ ತಿಂದು ನಿನ್ನ ಜೊತೆ ಮಲಗುವೆ’ ಎಂದು ಹೇಳಿದ ಬಗ್ಗೆ ಮುಸ್ಕಾನ್ ಮುಕಂದರ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. `ಕಚೇರಿಯಲ್ಲಿ ಕೆಲಸ ಮಾಡುವಾಗಲೂ ಪದೇ ಪದೇ ಮೈ ಮುಟ್ಟುತ್ತಿದ್ದರು. ಡಿಸೆಂಬರ್ 12ರ ರಾತ್ರಿ ಫೋನ್ ಮಾಡಿ ಕಿರುಕುಳ ಕೊಟ್ಟಿದ್ದರು. ಜನವರಿ 18ರಂದು ಕಚೇರಿಗೆ ಕರೆದು ಲೈಂಗಿಕ ಕ್ರಿಯೆಗೆ ಸಹಕಾರ ಕೇಳಿದ್ದರು’ ಎಂದು ಮಹಿಳೆ ದೂರಿದ್ದಾರೆ.
ಇದನ್ನು ಓದಿ: ಯಶೋಧರ ನಾಯ್ಕರಿಗೆ ಬ್ಲಾಕ್ಮೇಲ್: 25 ಲಕ್ಷ ರೂಪಾಯಿಗೆ ಬೇಡಿಕೆ!
ಅದಾದ ನಂತರ ಶಿರಸಿ ಎಪಿಎಂಸಿಯವರೆಗೆ ಹಿಂಬಾಲಿಸಿಕೊAಡು ಬಂದು `ತನಗೆ ಸಹಕಾರ ನೀಡದೇ ಇದ್ದರೆ ದುಡ್ಡಿನ ಅಪವಾದ ಹಾಕಿ ಕೆಲಸದಿಂದ ತೆಗೆಯುವೆ ಎಂದು ಬೆದರಿಸಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ ಕೈ ಹಿಡಿದು ಎಳೆದಿದ್ದಾರೆ’ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಶಿರಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







