`ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸೂಕ್ತಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಸಂವಾದ ಸಭೆ ನಡೆಸಬೇಕು’ ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಅರಣ್ಯ ಹಕ್ಕು ಮಾನ್ಯತೆ ನಿಯಮಗಳಿಗೆ 2012ರಲ್ಲಿ ತರಲಾದ ತಿದ್ದುಪಡಿಯ ಅಂಶಗಳು, ಗುಜರಾತ ಉಚ್ಛ ನ್ಯಾಯಾಲಯದ ತೀರ್ಪು, ಕೇಂದ್ರ ಬುಡಕಟ್ಟು ಮಂತ್ರಾಲಯದ 2014ರ ನಿರ್ದೆಶನಸಹಿತ ವಿವಿಧ ಅಂಶಗಳ ಬಗ್ಗೆ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. `ಇದೆಲ್ಲವನ್ನು ಪರಿಗಣಿಸಿ ಅಗತ್ಯ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಮೂಲಕ ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ನಡೆಸಬೇಕು. ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವವರಿಗೆ ಭೂಮಿಯ ಹಕ್ಕು ನೀಡಲು ರಾಜ್ಯ ಸರ್ಕಾರ ಇಚ್ಚಾಶಕ್ತಿ ತೋರಬೇಕು’ ಎಂದು ಅವರು ಒತ್ತಾಯಿಸಿದರು.
`ರಾಜ್ಯ ಸರ್ಕಾರದಿಂದ ಸಂವಾದ ಸಭೆಯನ್ನು ಆಯೋಜಿಸಬೇಕು. ಕಾಯ್ದೆಯ ಅನುಷ್ಠಾನ ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಬೇಕು. ಸರ್ಕಾರದ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯ ರಾಜ್ಯ ಮಟ್ಟದ ಅನುಷ್ಠಾನ ಸಮಿತಿಯ ನೇತೃತ್ವದಲ್ಲಿ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿ ಮತ್ತು ಜಿಲ್ಲಾ ವೇದಿಕೆಯ ಸಭೆ ನಡೆಯಬೇಕು. ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ಪ್ರಕ್ರಿಯೆಯಲ್ಲಿನ ಇತರ ಪಾರಂಪರಿಕ ಅರಣ್ಯವಾಸಿ ವ್ಯಾಖ್ಯೆಯ ಬಗೆಗಿನ ಮೂರು ತಲೆಮಾರಿನ ಶರತ್ತಿನ ವಿವಾದದ ಗೊಂದಲವನ್ನು ಬಗೆಹರಿಸಬೇಕು’ ಎಂದು ಅವರು ಆಗ್ರಹಿಸಿದರು. 2005ರ ಪೂರ್ವದ ನೈಜ ಸಾಗುವಳಿಯನ್ನು ಗುರುತಿಸಲು ಅಗತ್ಯ ಸಮೀಕ್ಷೆ ನಡೆಸುವದು ಸೇರಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟರು.
ಭರವಸೆ ನೀಡಿದ ಮುಖ್ಯಮಂತ್ರಿ
ಚoದ್ರಕಾoತ ಕೊಚರೇಕರ ಅವರು ನೀಡಿದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. `ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಲಾಗುವುದು. ಅರಣ್ಯವಾಸಿಗಳ ಹಿತರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂಬ ಭರವಸೆ ನೀಡಿದ್ದಾರೆ. `ಮುಖ್ಯಮಂತ್ರಿಗಳು ನುಡಿದಂತೆ ನಡೆದರೆ ಅಧಿಕಾರಿಗಳು ಸ್ಪಂದಿಸಲಿದ್ದಾರೆ. ಇದರಿಂದ ಅರಣ್ಯ ಭೂಮಿಯನ್ನು ಅವಲಂಬಿಸಿರುವವರ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ’ ಚಂದ್ರಕಾ0ತ ಕೊಚರೇಕರ ಅನಿಸಿಕೆ ಹಂಚಿಕೊoಡರು.





