ಬೇರೆಯವರ ಬೈಕ್ ಕದ್ದು ಪರಾರಿಯಾಗಿದ್ದ ಬಾಲಕನನ್ನು ಮುಂಡಗೋಡಿನ ಪೊಲೀಸರು ಹಿಡಿದಿದ್ದಾರೆ. ಬೈಕ್ ಓಡಿಸಲು ಲೈಸನ್ಸ್ ಸಹ ಇಲ್ಲದ ಹುಡುಗ ಇದೀಗ ಪೊಲೀಸರ ಆತಿಥ್ಯದಲ್ಲಿದ್ದು, ಪೊಲೀಸರು ಆತನ ಬಾಯಿಂದ ಸತ್ಯ ಹೊರಡಿಸಿದ್ದಾರೆ.
ಮೇ 15ರಂದು ಮುಂಡಗೋಡಿನ ಅಂಬೇಡ್ಕರ್ ಓಣಿಯಲ್ಲಿದ್ದ ಬೈಕ್ ಕಳ್ಳತನವಾಗಿತ್ತು. ತುಕಾರಾಮ ಕೋರವರ್ ಎಂಬಾತರು ತಮ್ಮ ಬೈಕ್ ಕಾಣೆಯಾದ ಬಗ್ಗೆ ಪೊಲೀಸ್ ದೂರು ನೀಡಿದ್ದರು. ಸಿಪಿಐ ರಂಗನಾಥ ನೀಲಮ್ಮನವರ್ ಅವರು ಬೈಕಿನ ಹುಡುಕಾಟ ಶುರು ಮಾಡಿದ್ದರು.
ಪಿಎಸ್ಐ ವಿನೋದ ಎಸ್ ಕೆ, ಪರಶುರಾಮ ಮಿರ್ಜಗಿ ಜೊತೆ ಎಎಸ್ಐ ಶಂಕ್ರಪ್ಪ ರಾಠೋಡ ಸೇರಿ ಬಾಲಕರೊಬ್ಬರನ್ನು ವಶಕ್ಕೆಪಡೆದರು. ಪೊಲೀಸ್ ಸಿಬ್ಬಂದಿ ಕೋಟೇಶ ನಾಗರವಳ್ಳಿ, ಮಹಾಂತೇಶ ಮುದೊಳ, ಸಂಜು ರಾಠೋಡ, ತಿರುಪತಿ ಚೌಡಣ್ಣನವರ್ ಹಾಗು ಬಸವರಾಜ ಒಡೆಯರ್ ಸೇರಿ ಆ ಬಾಲಕನ ವಿಚಾರಣೆ ನಡೆಸಿದರು.
ಆ ವೇಳೆ ಬಾಲಕ ತಾನು ಬೈಕ್ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ. ಜೊತೆಗೆ ಬೈಕನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಅಂಬೇಡ್ಕರ್ ಓಣಿಯಲ್ಲಿದ್ದ ಬೈಕನ್ನು ಚಾಣಾಕ್ಷತನದಿಂದ ಅಪಹರಿಸಿದ ವಿಧಾನದ ಬಗ್ಗೆಯೂ ತಿಳಿಸಿದ್ದಾನೆ. ಬೈಕ್ ಕಳ್ಳ ಅಪ್ರಾಪ್ತನಾದ ಕಾರಣ ಪೊಲೀಸರು ಆತನ ಹೆಸರು ಹೇಳಿಲ್ಲ. ಫೋಟೋವನ್ನು ಬಹಿರಂಗಪಡಿಸಿಲ್ಲ. ಜೊತೆಗೆ ಕಾಯ್ದೆಯಲ್ಲಿನ ವಿಶೇಷ ವಿಧಾನದ ಮೂಲಕ ಕಾನೂನು ಕ್ರಮ ಜರುಗಿಸಿದ್ದಾರೆ.







