ಆಪರೇಷನ್ ಸಿಂಧೂರ ನೆನಪಿಗಾಗಿ ಕಾರವಾರದಲ್ಲಿ `ಸಿಂಧೂರ ವನ’ ನಿರ್ಮಾಣಕ್ಕೆ ಜಯಕರ್ನಾಟಕ ಜನಪರ ವೇದಿಕೆ ಸಿದ್ಧತೆ ನಡೆಸಿದೆ. ಕಡವಾಡದ ದೇವತೆ ದೇವಿ ದೇಗುಲದ ಆವರಣದಲ್ಲಿ ಸಿಂಧೂರವನಕ್ಕಾಗಿ ಸಂಕಲ್ಪ ಮಾಡಲಾಗಿದ್ದು, ಪರಿಸರ ದಿನಾಚರಣೆಯ ದಿನ ಅಲ್ಲಿ ವಿವಿಧ ಗಿಡಗಳನ್ನು ನೆಡಲಾಗಿದೆ.
`ರಾಜ್ಯದ ಪ್ರತಿ ಜಿಲ್ಲೆ, ಎಲ್ಲಾ ತಾಲೂಕು ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಸಿಂಧೂರವನ ನಿರ್ಮಿಸಲು ಉದ್ದೇಶಿಸಿದೆ’ ಎಂದು ಸಂಘಟನೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಹೇಳಿದ್ದಾರೆ. `ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ ಸಿಂಧೂರವನ್ನು ಕಳೆದುಕೊಂಡ ನಮ್ಮ ಹೆಣ್ಣುಮಕ್ಕಳಿಗೆ ಮತ್ತು ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಾರ್ಯಚರಣೆ ನಡೆಸಿ ಉಗ್ರರ ಅಡಗು ತಾಣವನ್ನು ಧ್ವಂಸ ಮಾಡಿದ ಯೋಧರಿಗೆ ಗೌರವ ಸೂಚಿಸುವ ಉದ್ದೇಶದಿಂದ `ಸಿಂಧೂರ ವನ’ ಎಂಬ ಹೆಸರಿನಲ್ಲಿ ಅರಣ್ಯ ರಕ್ಷಿಸಲಾಗುತ್ತದೆ’ ಎಂದು ಅವರು ಯೋಜನೆಯ ಉದ್ದೇಶ ವಿವರಿಸಿದರು.
`ಜಯಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಗುಣರಂಜನ್ ಶೆಟ್ಟಿ ಅವರು ಕಳೆದ ಹಲವು ದಶಕಗಳಿಂದ ನಾಡು, ನುಡಿ, ನೆಲ, ಜಲ, ಭಾಷೆ, ಶಿಕ್ಷಣ, ರೈತರ, ಯೋಧರ, ಮಹಿಳೆಯರ, ಕಾರ್ಮಿಕರ, ದೀನದಲಿತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಪರಿಸರ ರಕ್ಷಣೆಯ ಉದ್ದೇಶದ ಜೊತೆ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸಿಂಧೂರ ವನ ನಿರ್ಮಾಣಕ್ಕೆ ಸಂಘಟನೆ ಮುಂದಾಗಿದೆ’ ಎಂದು ಅವರು ಹೇಳಿದರು. `ಭೂಮಿಯ ಮೇಲಿನ ನೈಸರ್ಗಿಕ ಸಂಪತ್ತುಗಳಾದ ಜೀವ ಜಲ, ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವುದಕ್ಕಾಗಿ ನಮ್ಮ ಸಂಘಟನೆ ದುಡಿಯುತ್ತಿದೆ. ಮನೆಗೊಂದು ಮರ, ಊರಿಗೊಂದು ಕೆರೆ ಎಂಬ ಅಭಿಯಾನದಡಿಯಲ್ಲಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದೊoದು ಕೆರೆಗಳನ್ನು ಪುನರ್ಜೀವನಗೊಳಿಸಲಾಗುತ್ತದೆ. ಪರಿಸರ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಸುವ ಹಾಗೂ ಪರಿಸರದ ಉಳಿವಿಗಾಗಿ ಸಾವಿರಾರು ಸಸಿಗಳನ್ನು ನೆಟ್ಟು ನೆಟ್ಟ ಗಿಡಗಳನ್ನು ಪೋಷಿಸುವ ಕೆಲಸವೂ ನಡೆದಿದೆ’ ಎಂದು ವಿವರಿಸಿದರು.
ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ್ ಗುನಗಿ, ಸಂಘಟನೆಯ ಜಿಲ್ಲಾ ಕಾರ್ಯಧ್ಯಕ್ಷ ರೋಷನ್ ಹರಿಕಂತ್ರ, ಪ್ರಮುಖರಾದ ಸುದೇಶ್ ನಾಯ್ಕ, ರಾಜು ತಾಂಡೇಲ್, ಮೋಹನ್ ಉಳ್ವೇಕರ್, ಪ್ರಕಾಶ್ ಗುನಗಿ, ಸುಧಾಕರ್, ರಾಹುಲ್. ಸಚಿನ್ ನೀತು ಇದ್ದರು. ಈ ಎಲ್ಲರೂ ಸೇರಿ ಕಡವಾಡದಲ್ಲಿ ಈ ದಿನ ರಕ್ತ ಚಂದನ ಹಾಗೂ ಹಣ್ಣಿನ ಗಿಡಗಳನ್ನು ನಾಟಿ ಮಾಡಿದರು.







