ಯಲ್ಲಾಪುರ: ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪಿಯೊಬ್ಬ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಬಳಿಯ ಕಾಡಿನಲ್ಲಿ ಈ ಘಟನೆ ನಡೆದಿದೆ.
ವಾರೆಂಟ್ ಮೇಲೆ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಅಂತರ್ ಜಿಲ್ಲಾ ರೌಡಿಶೀಟರ್ ಜೊಯಿಡಾ ತಾಲೂಕಿನ ರಾಮನಗರ ರಾಮಲಿಂಗಗಲ್ಲಿಯ ಪ್ರವೀಣ ಮನೋಹರ ಸುಧೀರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಸೇರಿ ಒಟ್ಟು 16 ಪ್ರಕರಣಗಳಲ್ಲಿ ಭಾಗಿಯಾಗಿರುವ ಪ್ರವೀಣನಿಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಅವನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದರು. ಯಲ್ಲಾಪುರ-ಹಳಿಯಾಳ ರಾಜ್ಯ ಹೆದ್ದಾರಿ ಸುತ್ತ ಕಾರ್ಯಾಚರಣೆ ನಡೆಸುತ್ತಿರುವಾಗ ಕಣ್ಣಿಗೇರಿ ಬಳಿ ಆತ ಇರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಬಂಧಿಸಲು ತೆರಳಿದ ಪಿಎಸ್ಐ ಮಹಾಂತೇಶ ನಾಯಕ, ಸಿಬ್ಬಂದಿ ಜಾಫರ ಅದರಗುಂಚಿ, ಅಸ್ಕಂ ಘಟ್ಟದ, ಮಲ್ಲಿಕಾಜುನ ಹೊಸಮನಿ ಅವರ ಮೇಲೆ ಪ್ರವೀಣ ಚಾಕು ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಪಿ.ಎಸ್.ಐ ಮಹಾಂತೇಶ ನಾಯಕ 2 ಸುತ್ತು ಗಾಳಿಯಲ್ಲಿ ಫೈರ್ ಮಾಡಿ ಆಪಾದಿತನಿಗೆ ಶರಣರಾಗಲು ತಿಳಿಸಿದರೂ, ಆತ ಪುನಃ ಹಲ್ಲೆಗೆ ಮುಂದಾದಾಗ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ.
ಗಾಯಾಳು ಆರೋಪಿ ಹಾಗೂ ಗಾಯಗೊಂಡ ಪೊಲೀಸರಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಗೆ ಎಸ್.ಪಿ ನಾರಾಯಣ ಎಂ ಭೇಟಿ ನೀಡಿ ಗಾಯಾಳು ಪೊಲೀಸರ ಆರೋಗ್ಯ ವಿಚಾರಿಸಿದರು. ಘಟನೆ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ಜಗದೀಶ, ಡಿ.ಎಸ್.ಪಿಗಳಾದ ಗೀತಾ ಪಾಟೀಲ್, ಶಿವಾನಂದ ಮದರಖಂಡಿ ಉಪಸ್ಥಿತರಿದ್ದರು.