ಯಲ್ಲಾಪುರ ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಎಸ್ ಸಿ, ಎಸ್ ಟಿ ಕುಟುಂಬಕ್ಕೆ ನೀಡಬೇಕಾದ ಅನುದಾನವನ್ನು ದುರ್ಬಳಕ್ಕೆ ಮಾಡಲಾಗಿದೆ ಎಂದು ದೇಹಳ್ಳಿಯ ಸಾಮಾಜಿಕ ಕಾರ್ಯಕರ್ತ ನಾಗರಾಜ ಭಟ್ಟ ಚಾಪೇತೋಟ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ದೇಹಳ್ಳಿ ಪಂಚಾಯತಿಯ ಎಸ್ ಸಿ, ಎಸ್ ಟಿ ಅನುದಾನ ದುರ್ಬಳಕೆಗೆ ಸಂಬಂಧಿಸಿದಂತೆ 24/09/2024 ರಂದು ಮಾಹಿತಿ ಹಕ್ಕಿನಡಿ ಕೇಳಲಾಗಿತ್ತು, ಆದರೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಒಂದು ತಿಂಗಳ ನಂತರ ಪ್ರಥಮ ಮೇಲ್ಮನವಿಯನ್ನೂ ನೀಡಲಾಯಿತು. ಆಗ ಪಂಚಾಯಿತಿಯಿಂದ 1,30,000 ರೂಗಳ ಕಂಪ್ಯೂಟರ್ ಬಿಲ್ ಮಾತ್ರ ನೀಡಲಾಗಿದೆ. ಆಯಾ ಫಲಾನುಭವಿಗಳಿಗೆ ನೀಡಿದ ಪೂರ್ಣ ಮಾಹಿತಿ ಕೇಳಲಾಗಿದ್ದು, ಇದುವರೆಗೂ ನೀಡಿಲ್ಲ ಎಂದು ನಾಗರಾಜ ಭಟ್ಟ ಚಾಪೇತೋಟ ಹೇಳಿದ್ದಾರೆ.
ಈ ಕುರಿತಂತೆ ಯಲ್ಲಾಪುರ ತಾಲೂಕಾ ಪಂಚಾಯಿತಿಗೆ 07/07/2025 ರಂದು ಮಾಹಿತಿ ಪೂರೈಸಲು ಕೇಳಲಾಗಿತ್ತು. ಈ ಕುರಿತು ಮಾಹಿತಿಯನ್ನು ನೀಡಲು ಪಿಡಿಒ ಗೆ ಸೂಚಿಸಿದ್ದರು. ಆದರೆ ಪಿಡಿಒ ಯಾವುದೇ ಮಾಹಿತಿ ನೀಡಿಲ್ಲ. ಪಂಚಾಯತಿಗೆ ಬಂದಿದ್ದ ಎಸ್ ಸಿ, ಎಸ್ ಟಿ ಅನುದಾನ ಬಳಕೆಯ ಅವ್ಯವಹಾರ ನಡೆದಿದೆ. ಇದರಲ್ಲಿ ಮೇಲಧಿಕಾರಿಗಳು ಮತ್ತು ಪ್ರಮುಖರು ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಸೂಕ್ತ ತನಿಖಾ ಕಾರ್ಯ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಲೋಕಾಯುಕ್ತದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದು ನಾಗರಾಜ ಭಟ್ಟ ಎಚ್ಚರಿಸಿದ್ದಾರೆ.





