ಯಲ್ಲಾಪುರ ತಾಲೂಕಿನ ಚಂದಗುಳಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ತುರುವೆಕೆರೆಯ ಶ್ರೀ ಪ್ರಣವಾನಂದ ತೀರ್ಥ ಸ್ವಾಮಿಗಳ ಚಾತುರ್ಮಾಸ್ಯ ವ್ರತದ ಪ್ರಯುಕ್ತ ತೇಲಂಗಾರಿನ ಕರ್ನಾಟಕ ಕಲಾ ಸನ್ನಿಧಿ ಕಲಾವಿದರಿಂದ ಗಂಗಾವತರಣ ತಾಳಮದ್ದಲೆ ನಡೆಯಿತು.
ಭಗೀರಥನ ತಪಸ್ಸು, ಪರಿಶ್ರಮದ ಫಲವಾಗಿ ಸುರನದಿಯಾದ ಗಂಗೆ ಭೂಮಿಗಿಳಿದ ಕಥಾಹಂದರವನ್ನು ಶ್ರೀಗಳ ಸಮ್ಮುಖದಲ್ಲಿ ಕಲಾವಿದರು ಪ್ರಸ್ತುತಪಡಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ ಭಟ್ಟ ಯಲ್ಲಾಪುರ, ಮದ್ದಲೆವಾದಕರಾಗಿ ವಿಶ್ವೇಶ್ವರ ಹೆಬ್ಬಾರ ಹಾಲೆಪಾಲ, ಸುಬ್ರಹ್ಮಣ್ಯ ಭಟ್ಟ ಚಂದಗುಳಿ ಭಾಗವಹಿಸಿದ್ದರು.
ಜಹ್ನು ಮಹರ್ಷಿಯಾಗಿ ನರಸಿಂಹ ಭಟ್ಟ ಕುಂಕಿಮನೆ, ಭಗೀರಥನಾಗಿ ನಿರಂಜನ ಜಾಗನಳ್ಳಿ, ಈಶ್ವರನಾಗಿ ಶ್ರೀಧರ ಅಣಲಗಾರ, ಗಂಗೆಯಾಗಿ ದೀಪಕ ಭಟ್ಟ ಕುಂಕಿ ಪಾತ್ರ ನಿರ್ವಹಿಸಿದರು.
ತಾಳಮದ್ದಲೆಯನ್ನು ಸಂಪೂರ್ಣ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ಕಲಾವಿದರಿಗೆ ಶಾಲು ಹೊದೆಸಿ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.