ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿ ಹದಗೆಟ್ಟು ಹೊಂಡ-ಗುಂಡಿಗಳು ಹೆಚ್ಚಾಗಿವೆ. ವಾಹನ ಸವಾರರು ಓಡಾಡಲು ಕಷ್ಟವಾಗುತ್ತಿದೆ.
ಚವತ್ತಿಯಿಂದ ತಾರೇಹಳ್ಳಿ ಕ್ರಾಸ್ ವರೆಗೆ ದೊಡ್ಡ ದೊಡ್ಡ ಹೊಂಡಗಳೇ ಉಂಟಾಗಿವೆ. ಅದನ್ನು ಸರಿಪಡಿಸದೇ ಇರುವ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದ ಸ್ಥಳೀಯರು, ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಹನ ಸವಾರರು ದೊಡ್ಡ ಗುಂಡಿಗಳಲ್ಲಿ ವಾಹನಗಳನ್ನು ಇಳಿಸಿ ಬೀಳುತ್ತ ಏಳುತ್ತ ಸಾಗಬೇಕು. ವಾಹನವೂ ಕೆಡುತ್ತದೆ, ಸವಾರರ ಆರೋಗ್ಯವೂ ಕೆಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ರಸ್ತೆಯಲ್ಲಿನ ಗುಂಡಿಗಳು ತೀರಾ ಅಪಾಯಕಾರಿ. ಮಳೆಯ ನೀರು ತುಂಬಿ ಗುಂಡಿಯ ಆಳ ಅರಿಯದೇ ಸವಾರರು ಬೀಳುವ ಅಪಾಯ ಹೆಚ್ಚು. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಇದು ದೊಡ್ಡ ಸವಾಲು.
ರಸ್ತೆ ನಿರ್ವಹಣೆ ಕೈಗೊಳ್ಳಬೇಕಾದವರು ಕೈಕಟ್ಟಿ ಕುಳಿತಿರುವುದರಿಂದ ಸ್ಥಳೀಯರು ಬೇಸತ್ತು, ಈ ರೀತಿಯ ವಿನೂತನ ಪ್ರತಿಭಟನೆಗೆ ಇಳಿದಿದ್ದಾರೆ. ನಿದ್ರೆ ಮಾಡುತ್ತಿರುವ ಜನಪ್ರತಿನಿಧಿಗಳನ್ನು ಎಬ್ಬಿಸುವುದು ನಮ್ಮ ಉದ್ದೇಶ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಗಮನ ಹರಿಸಬಹುದೇ? ಕಾದು ನೋಡಬೇಕು.







