ಯಲ್ಲಾಪುರದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕವಿ ಕಾವ್ಯ ಸಮಯ ಕಾರ್ಯಕ್ರಮ ನಡೆಯಿತು.
ಅಭ್ಯಾಗತರಾಗಿದ್ದ ಉಪನ್ಯಾಸಕ ರವಿ ಶೇಷಗಿರಿ ಮಾತನಾಡಿ, ಡಿಜಿಟಲ್ ಮಾಧ್ಯಮಗಳ ಅಬ್ಬರದ ನಡುವೆ ಸಾಹಿತ್ಯದ ಓದಿನ ಅಭಿರುಚಿಯನ್ನು ಬೆಳೆಸುವ ಪ್ರಯತ್ನ ಆಗಬೇಕು. ತನ್ನ ತಲೆಮಾರಿನ ತುಡಿತವನ್ನು ಸಾಮಾಜಿಕ ಕಾಳಜಿಯನ್ನು ಕಟ್ಟಿಕೊಡುವ ಮೂಲಕ ಮುಂದಿನ ತಲೆಮಾರಿಗೆ ವರ್ಗಾಯಿಸುವ ಜವಾಬ್ದಾರಿಯನ್ನು ಕವಿಗಳು ಹೊಂದಿದ್ದಾರೆ ಎಂದರು.
ಪತ್ರಕರ್ತ ನರಸಿಂಹ ಸಾತೊಡ್ಡಿ ಮಾತನಾಡಿ, ಕಸಾಪ ಸಕ್ರಿಯವಾಗಿದ್ದು, ತಾಲೂಕಿನ ಗ್ರಾಮೀಣ ಭಾಗದ ವಿವಿಧೆಡೆ ಸಾಹಿತ್ಯ ಚಟುವಟಿಕೆ ನಡೆಸುತ್ತಿದೆ. ಸಾಹಿತ್ಯ ಚಟುವಟಿಕೆಗೆ ಭವನ ಕೇಂದ್ರವಾಗಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಕನೇನಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಗಳ ಬಗ್ಗೆ ವಿವರಿಸಿದರು.
ಕವಿಗಳಾದ ಸುಬ್ರಾಯ ಬಿದ್ರೆಮನೆ,ಸುನಂದಾ ಪಾಟಣಕರ, ಸುಬ್ರಹ್ಮಣ್ಯ ಹೀರೆಸರ, ಶ್ರೀಲತಾ ರಾಜೀವ, ಸೀತಾ ಭಟ್ಟ ಮಲವಳ್ಳಿ, ದತ್ತಾತ್ರೇಯ ಭಟ್ಟ ಕಣ್ಣಿಪಾಲ್, ಶಿವರಾಮ ಗಾಂವ್ಕಾರ ಕಲ್ಮನೆ, ಸಕೀನಾ, ವೈಶಾಲಿ ಕವಿತೆ ವಾಚಿಸಿದರು. ಕಸಾಪ ಗೌರವ ಕಾರ್ಯದರ್ಶಿ ಜಿ.ಎನ್. ಭಟ್ಟ ತಟ್ಟಿಗದ್ದೆ ಸ್ವಾಗತಿಸಿದರು. ಪತ್ರಕರ್ತರಾದ ಶ್ರೀಧರ ಅಣಲಗಾರ ನಿರ್ವಹಿಸಿದರು. ದತ್ತಾತ್ರೇಯ ಭಟ್ಟ ವಂದಿಸಿದರು.







