ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ‘ ನಮಸ್ತೇ ಸದಾ ವತ್ಸಲೇ…., ಹಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಡಿಕೆಶಿ ಕಾಂಗ್ರೆಸ ಪಕ್ಷ ಅಥವಾ ಸರಕಾರದಲ್ಲಿ ಏನೇ ಆಗಿದ್ದರೂ, ಅದಕ್ಕೂ ಮೊದಲು ಅವರೊಬ್ಬ “ಹಿಂದು ಹಾಗೂ ಹಿಂದುಸ್ತಾನಿ” ಆಗಿದ್ದಾರೆ. ತಾನು ಬದುಕಿ ಬಾಳುವ ಈ ಭೂಮಿತಾಯಿಗೆ ನಮಸ್ಕರಿಸಿದರೆ, ಗೌರವ ಸಲ್ಲಿಸಿದರೆ ಕಾಂಗ್ರೆಸ್ಸಿಗರಿಗೇಕೆ ಮುಜುಗರ ಆಗುತ್ತಿದೆ ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ಪ್ರಶ್ನಿಸಿದ್ದಾರೆ.
ಡಿಕೇಶಿ ಸದನದಲ್ಲಿ ಹೇಳಿದ ” ನಮಸ್ತೇ ಸದಾ ವತ್ಸಲೇ ಮಾತೃಭೂಮಿ, ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್” ಇದರ ಅರ್ಥ, ” ನಾನು ಜನ್ಮ ತಳೆದ ಹೇ ತಾಯ್ನೆಲವೇ, ನಿನ್ನನ್ನು ಸದಾ ವಂದಿಸುತ್ತೇನೆ. ನಾನು ಸುಖವಾಗಿರಲು, ಅಭಿವೃಧ್ದಿ ಹೊಂದಲು ಕಾರಣವಾಗಿರುವ ನೀನು ನಿತ್ಯ ಸ್ಮರಣೀಯಳು”. ಹೀಗೆ ಹೇಳುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ಸಿಗರು ತಮ್ಮದೇ ಪಕ್ಷದ ಓರ್ವ ಹಿರಿಯ ವ್ಯಕ್ತಿ ಆಡಿದ ಮಾತುಗಳನ್ನು ಅಪಾರ್ಥ ಮಾಡಿಕೊಳ್ಳುವುದಕ್ಕಿಂತ, ತಾವೂ ಸಹ ‘ನಮಸ್ತೇ ಸದಾ ವತ್ಸಲೇ…..’ ಹಾಡಿ, ಸ್ವದೇಶಿ ಅಭಿಮಾನ ಪ್ರಕಟಿಸಬೇಕು. ಸುಮ್ಮನೆ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದರು.







