ಅಕಾಲಿಕ ಮಳೆ , ಕೊಳೆ ರೋಗ , ಪ್ರಾಣಿಗಳಿಂದ ಬಾಧೆ…ಹೀಗೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ರೈತರಿಗೆ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯತನ ಹಾಗೂ ಸರ್ಕಾರದ ಕುರುಡುತನದಿಂದ ಮತ್ತೊಂದು ಪೆಟ್ಟು ಬಿದ್ದಿದೆ.
ಯಲ್ಲಾಪುರ ತಾಲೂಕಿನಲ್ಲಿ ಬಹುತೇಕ ಕೃಷಿಕರು ಭತ್ತ , ಅಡಿಕೆ ,ತೆಂಗು, ಜೋಳ, ಹತ್ತಿ,ಕಬ್ಬು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಾರೆ. ಅಕಾಲಿಕ ಮಳೆ ಹಾಗೂ ಪ್ರಕೃತಿ ಮುನಿಸಿನಿಂದ ರೈತರಿಗೆ ಬೆಳೆ ನಷ್ಟವಾದರೂ ಕಷ್ಟವಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹವಮಾನ ಆಧಾರಿತ ಬೆಳೆ ವಿಮೆ( ಫಸಲ್ ಭಿಮಾ) ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿ ತಾಂತ್ರಿಕ ಕಾರಣದಿಂದ ಬೆಳೆ ವಿಮೆ ತುಂಬಲು ಸಾಧ್ಯವಾಗದ ಕಾರಣ, ಹಲವು ರೈತರಿಗೆ ವಿಮಾ ಸೌಲಭ್ಯವೇ ಇಲ್ಲದಂತಾಗಿದೆ. ಹಲವಾರು ರೈತರು ಕಂಗಾಲಾಗಿದ್ದಾರೆ.
ತಾಲೂಕಿನಲ್ಲಿ ಬೆಳೆಸಾಲ ಪಡೆದ ರೈತರ ವಿಮಾ ಹಣವನ್ನು ಸ್ಥಳೀಯ ಸಹಕಾರಿ ಸಂಘಗಳೇ ರೈತರ ಖಾತೆಗೆ ಖರ್ಚು ಹಾಕಿ ತುಂಬುವುದು ರೂಢಿಯಲ್ಲಿದೆ. ಆದರೆ ಸಹಕಾರಿ ಸಂಘಗಳೂ ಎಷ್ಟು ಪ್ರಯತ್ನ ಪಟ್ಟರೂ ಒಂದೊಂದು ಸಹಕಾರಿ ಸಂಘದಲ್ಲಿ 50 ರಿಂದ 100 ಕ್ಕೂ ಹೆಚ್ಚು ರೈತರ ಬೆಳೆ ವಿಮೆ ತುಂಬಲಾಗದ ಸ್ಥಿತಿ ಎದುರಾಗಿದೆ. ಇಂತಹ ಸುಮಾರು 18 ಕ್ಕೂ ಹೆಚ್ಚು ಸಹಕಾರಿ ಸಂಘಗಳು ತಾಲೂಕಿನಲ್ಲಿದೆ.
ಸರ್ಕಾರದ ಬೇಜವಾಬ್ದಾರಿ ಕಾನೂನು ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ತಾಲೂಕಿನಲ್ಲಿ ಸುಮಾರು 1200 ಕ್ಕೂ ಮಿಕ್ಕಿದ ರೈತರು ಬೆಳೆ ವಿಮೆಯಿಂದ ವಂಚಿತರಾಗುವ ಸ್ಥಿತಿ ಬಂದಿದೆ. ತಾಂತ್ರಿಕ ಸಮಸ್ಯೆಯಿಂದ ಹಣ ತುಂಬಿದರೂ ಅದು ಸ್ವೀಕಾರವಾಗುತ್ತಿಲ್ಲ. ಈ ಬಗ್ಗೆ ವಿಮಾ ಕಂಪನಿಯವರನ್ನು ಕೇಳಿದಲ್ಲಿ ಪಹಣಿ ಪತ್ರಿಕೆಯಲ್ಲಿ ಯಾವುದೇ ಬೆಳೆ ನಮೂದು ಇಲ್ಲದ ರೈತರದು ಹಾಗೂ ಪ್ರೂಟ್ಸ್ ಐಡಿ ಅಪಡೇಟ್ ಆಗಿರದ ರೈತರ ವಿಮೆ ಸ್ವಿಕಾರವಾಗುತ್ತಿಲ್ಲ ಎನ್ನುತ್ತಾರೆ.
ರೈತರು ತಮ್ಮ ಪಹಣಿ ಪತ್ರಿಕೆಯಲ್ಲಿ ವಾರಸಾ ಬದಲಾವಣೆ , ವಾರಸಾ ಎಂಟ್ರಿ, ಅಪ್ರಾಪ್ತ ರಕ್ಷಕ ತೆಗೆಯುವುದು ಸೇರಿದಂತೆ ಹಲವು ಬದಲಾವಣೆಗಳಾದಾಗ ಪಹಣಿ ಪತ್ರಿಕೆಯಲ್ಲಿ ನೋ ಕ್ರಾಪ್ ಎಂದು ನಮೂದಾಗುತ್ತದೆ. ಇದು ರೈತರ ಗಮನಕ್ಕೆ ಬರದೆ ಈ ಸಮಸ್ಯೆ ಉಂಟಾಗುತ್ತಿದೆ. ಪತ್ರಿಕೆಯಲ್ಲಿ ತಿದ್ದುಪಡಿ ಆದರೆ ಬೆಳೆಯೂ ಬದಲಾವಣೆಯಾಗುತ್ತದೆಯೇ ಎಂಬ ಪ್ರಶ್ನೆ ರೈತರದ್ದು.
ಇನ್ನು ಕಂದಾಯ ಇಲಾಖೆಯು ಬೆಳೆ ಸರ್ವೆಯನ್ನು ಅಕ್ಟೋಬರ್ – ನವೆಂಬರ್ ತಿಂಗಳಿನಲ್ಲಿ ಪ್ರಾರಂಭಿಸುತ್ತದೆ. ಅದರ ನಂತರ ಬೆಳೆ ವಿವರ ಪಹಣಿಯಲ್ಲಿ ನಮೂದಾಗಬೇಕು. ಆದರೆ ವಿಮಾ ತುಂಬಲು ಆಗಸ್ಟ್ 30 ಕೊನೆಯ ದಿನ. ಈ ಅವ್ಯವಸ್ಥೆಗೆ ಯಾರು ಹೊಣೆ? ಬೆಳೆಸಾಲ ತೆಗೆದುಕೊಳ್ಳಲು ಸಾಕಾಗುವ ದಾಖಲೆ ಬೆಳೆ ವಿಮೆಗೆ ಸಾಲುತ್ತಿಲ್ಲವೆ? ಎಂಬುದು ರೈತರ ಪ್ರಶ್ನೆ.
ಅಧಿಕಾರಿಗಳು ಈ ಬಗ್ಗೆ ಜಾಗೃತರಾಗಿ ಸಹಕಾರಿ ಸಂಘಗಳ ಸಹಕಾರದೊಂದಿಗೆ ರೈತರಿಗೆ ನ್ಯಾಯ ಕೊಡಿಸಬೇಕೆಂಬ ಆಗ್ರಹ ರೈತರಿಂದ ಕೇಳಿ ಬಂದಿದೆ.







