ಯಲ್ಲಾಪುರ ತಾಲೂಕಿನಾದ್ಯಂದ ಗಣೇಶ ಚತುರ್ಥಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆ ಮನೆಯಲ್ಲಿ ಗಣೇಶನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪಂಚಾಮೃತಾಭಿಷೇಕ, ದೂರ್ವಾರ್ಚನೆ, ಗಣಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪಂಚಕಜ್ಜಾಯ, ಮೋದಕ, ಎಳ್ಳುಂಡೆ ಸೇರಿ ವಿವಿಧ ಭಕ್ಷ್ಯಗಳನ್ನು ಗಣಪತಿಗೆ ಸಮರ್ಪಿಸಲಾಯಿತು. ಸ್ಥಳೀಯರು ಮಾತ್ರವಲ್ಲದೇ, ಜಿಲ್ಲೆ, ಹೊರ ಜಿಲ್ಲೆಗಳಿಂದಲೂ ಆಗಮಿಸಿದ ಸಾವಿರಾರು ಭಕ್ತರು ಘಂಟೆ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದರು.
ತಾಲೂಕಿನಾದ್ಯಂತ ಗಣಪತಿ ದೇವಾಲಯಗಳಲ್ಲಿ ಗಣಹವನ, ಸತ್ಯಗಣಪತಿ ಕಥೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾರ್ವಜನಿಕ ಗಜಾನನೋತ್ಸವಗಳಲ್ಲಿಯೂ ಗಣೇಶನ ಮೂರ್ತಿ ಪ್ರತಿಷ್ಠಾಪನೆಯ ಸಂಭ್ರಮ ಇಂದಿನಿಂದ ಆರಂಭವಾಗಿದೆ.







