ವೈದ್ಯರೆಂದರೆ ಸದಾ ಕರ್ತವ್ಯದಲ್ಲಿರುವವರು, ಹಬ್ಬ-ಹರಿದಿನಗಳನ್ನು ಆಚರಿಸಲೂ ಸಮಯ ಇಲ್ಲದ ಸೇವೆ ಅವರದು. ಅಂತಹ ಒತ್ತಡದ ಕಾರ್ಯದ ನಡುವೆಯೂ ಬಿಡುವು ಮಾಡಿಕೊಂಡು ಗಣಪತಿಯ ಮೂರ್ತಿಯನ್ನು ತಾವೇ ತಯಾರಿಸಿ ಗಮನ ಸೆಳೆದಿದ್ದಾರೆ ಯಲ್ಲಾಪುರದ ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್.
ಪ್ರತಿ ವರ್ಷ ಗಣೇಶ ಚತುರ್ಥಿಯಂದು ತಮ್ಮ ಮನೆಯಲ್ಲಿ ಪೂಜಿಸುವ ಮೂರ್ತಿಯನ್ನು ತಾವೇ ತಯಾರಿಸುತ್ತ ಬಂದಿರುವುದು ಪವಾರ ಅವರ ವಿಶೇಷತೆ.
ಪ್ರತಿ ವರ್ಷ ಕರ್ತವ್ಯದ ನಡುವೆಯೂ ಸಮಯ ಮಾಡಿಕೊಂಡು ಈ ಕಾರ್ಯವನ್ನು ಮಾಡಿಕೊಂಡು ಬಂದಿದ್ದಾರೆ. ರಾಸಾಯನಿಕ ಬಣ್ಣಗಳನ್ನು ಬಳಸದೇ ಪರಿಸರ ಸ್ನೇಹಿ ಗಣಪನ ಮೂರ್ತಿ ತಯಾರಿಸುತ್ತಾರೆ.
ಸುರೇಶ ಪೂಜಾರಿ ಎಂಬವರ ಮಾರ್ಗದರ್ಶನದಲ್ಲಿ ಮೂರ್ತಿ ತಯಾರಿಕೆಯ ಕಲೆಯನ್ನು ಪವಾರ್ ಅಳವಡಿಸಿಕೊಂಡಿದ್ದಾರೆ.
ಈ ಬಾರಿ ನಟರಾಜನ ಭಂಗಿಯಲ್ಲಿ ನಿಂತ ಗಣಪತಿಯ ಮೂರ್ತಿಯನ್ನು ಪವಾರ್ ರಚಿಸಿದ್ದು ಆಕರ್ಷಕವಾಗಿ ಮೂಡಿ ಬಂದಿದೆ.







