ಸ್ವರ್ಣವಲ್ಲೀ ಮಠದಲ್ಲಿ ನಡೆದ ಯಕ್ಷೋತ್ಸವದ ತಾಳಮದ್ದಲೆ ಸ್ಪರ್ಧೆಯಲ್ಲಿ ಯಲ್ಲಾಪುರ ತಾಲೂಕಿನ ಮಾಗೋಡಿನ ನರಸಿಂಹ ಭಟ್ಟ ಕುಂಕಿಮನೆ ನಿರ್ದೇಶನದ ವಿವಿಧ ವಿಭಾಗಗಳ ನಾಲ್ಕು ತಂಡಗಳು ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ.
ಸಾಂಸ್ಥಿಕ ವಿಭಾಗದಲ್ಲಿ ಯಕ್ಷ ಸಂಸ್ಕೃತಿ ಪರಿವಾರ ಹಸರಪಾಲ ಪ್ರಥಮ, ಕಿರಿಯರ ವಿಭಾಗದಲ್ಲಿ ಕಟ್ಟಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದಿದ್ದಾರೆ.
ಹಿರಿಯರ ವಿಭಾಗದಲ್ಲಿ ನಂದೊಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮೂರನೇ ಸ್ಥಾನ ಹಾಗೂ ಕಿರಿಯರ ವಿಭಾಗದಲ್ಲಿ ಕೊಡಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮೂರನೇ ಸ್ಥಾನ ಪಡೆದಿದ್ದಾರೆ. ಈ ಬಾರಿ ನರಸಿಂಹ ಭಟ್ಟ ಅವರ ನಿರ್ದೇಶನದ 7 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಬಹುಮಾನ ವಿತರಿಸಿ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
2016 ರಿಂದಲೂ ನರಸಿಂಹ ಭಟ್ಟರ ನಿರ್ದೇಶನದ ತಂಡಗಳು ಯಕ್ಷೋತ್ಸವದ ಸ್ಪರ್ಧೆಯಲ್ಲಿ ಭಾಗವಹಿಸುತ್ತ ಬಂದಿದ್ದು, ಪ್ರತಿ ವರ್ಷ ಒಂದಿಲ್ಲೊಂದು ಪ್ರಶಸ್ತಿ ಪಡೆಯುತ್ತಿರುವುದು ವಿಶೇಷ. ಯಲ್ಲಾಪುರ ತಾಲೂಕಿನ ನಂದೊಳ್ಳಿ, ಮಾಗೋಡ, ಹಸರಪಾಲ, ಕಟ್ಟಿಗೆ, ಕೊಡಸೆ, ನಾಯಕನಕೆರೆ ತಂಡಗಳು ಮಾತ್ರವಲ್ಲದೇ, ಜೊಯಿಡಾ ತಾಲೂಕಿನ ಗುಂದದಿಂದಲೂ ನರಸಿಂಹ ಭಟ್ಟರ ನಿರ್ದೇಶನದ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿವೆ.
ಪ್ರತಿ ವರ್ಷ ಬೇರೆ ಬೇರೆ ಪ್ರಸಂಗಗಳ ತರಬೇತಿ ನೀಡಿ, ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ನರಸಿಂಹ ಭಟ್ಟ ಶ್ರಮವನ್ನು ಈ ಬಾರಿಯ ಕಾರ್ಯಕ್ರಮದಲ್ಲಿ ಹಿರಿಯ ಅರ್ಥಧಾರಿ ಎಂ.ಎನ್.ಹೆಗಡೆ ಹಳವಳ್ಳಿ ಅವರು ಶ್ಲಾಘಿಸಿರುವುದು ಉಲ್ಲೇಖನೀಯ. ಜೊತೆಗೆ ಬಹುಮಾನ ವಿತರಣೆಯ ಸಂದರ್ಭದಲ್ಲಿ ಶ್ರೀಗಳಿಂದಲೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.







