ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಅನಗತ್ಯವಾದ ಡಿ.ಜೆ ಅಬ್ಬರ, ಚಲನಚಿತ್ರ ಗೀತೆಗಳಂತಹ ಅಪಸವ್ಯಗಳನ್ನು ತಪ್ಪಿಸುವ ಬಗ್ಗೆ ಕಳೆದ 2-3 ವರ್ಷಗಳಲ್ಲಿ ವ್ಯಾಪಕವಾದ ಜಾಗೃತಿ ಮೂಡಿಸಲಾಗುತ್ತಿದೆ. ಅದಕ್ಕೆ ಸ್ಪಂದಿಸುತ್ತ ಉತ್ಸವ ಸಮಿತಿಗಳೂ ಮಾದರಿಯಾಗಿಯೇ ನಡೆದುಕೊಳ್ಳುತ್ತಿವೆ. ಆದರೆ ಬೇರೆಯವರಿಗೆ ಮಾದರಿಯಾಗಬೇಕಿದ್ದ ಯಲ್ಲಾಪುರದ ಅರಣ್ಯ ಇಲಾಖೆಯ ಅಧಿಕಾರಿಗಳೇ ಗಣೇಶ ಮೂರ್ತಿ ವಿಸರ್ಜನೆ ವೇಳೆ ಅಬ್ಬರದ ಹಾಡುಗಳನ್ನು ಹಚ್ಚಿ ಶಬ್ದಮಾಲಿನ್ಯ ಉಂಟು ಮಾಡಿರುವ ಬಗ್ಗೆ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ.
ಅರಣ್ಯ ಇಲಾಖೆಯ ಆವಾರದಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ಐದು ದಿನಗಳ ಕಾಲ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಐದನೇ ದಿನ ಡಿಜೆ ಅಬ್ಬರದೊಂದಿಗೆ ಮೂರ್ತಿ ವಿಸರ್ಜನೆ ಮಾಡುತ್ತಿದ್ದರು.
ಈ ಬಾರಿ ಡಿಜೆಗೆ ಅನುಮತಿ ಇಲ್ಲದಿದ್ದರೂ ಹಾಡುಗಳ ಅಬ್ಬರಕ್ಕೇನೂ ಕೊರತೆಯಾಗಿಲ್ಲ. ಗಣೇಶನ ಮೂರ್ತಿ ಎದುರು ‘ಯಾರೆ ನೀನು ರೋಜಾ ಹೂವೆ, ಮಸ್ತ್ ಮಸ್ತ್ ಹುಡುಗಿ ಬಂದ್ಲು, ಬ್ಯಾಂಗಲ್ ಬಂಗಾರಿ’ ಹೀಗೆ ಸಾಲು ಸಾಲು ಗಣೇಶನಿಗೆ ಸಂಬಂಧವೇ ಇಲ್ಲದ ಚಿತ್ರಗೀತೆಗಳಿಗೆ ಅರಣ್ಯ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು, ಕುಟುಂಬದವರು ಕುಣಿದು ಕುಪ್ಪಳಿಸಿದ್ದಾರೆ.
ತಾಲೂಕಿನ ಮಂಚಿಕೇರಿ ಹಾಗೂ ಪಟ್ಟಣದ ವಿವಿಧೆಡೆ ಸಾಂಪ್ರದಾಯಿಕ ವಾದ್ಯಗಳನ್ನು, ನೃತ್ಯಗಳನ್ನು, ಗಣೇಶನ ಭಜನೆ ಮಾಡುತ್ತ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮಾಡಿರುವ ನಿದರ್ಶನ ಇದ್ದಾಗಿಯೂ, ಇತರರಿಗೆ ಆದರ್ಶವಾಬೇಕಾಗಿದ್ದ ಅರಣ್ಯ ಇಲಾಖೆಯೇ ಚಿತ್ರಗೀತೆಗಳ ಅಬ್ಬರದೊಂದಿಗೆ ಶಬ್ದ ಮಾಲಿನ್ಯ ಉಂಟು ಮಾಡಿರುವುದು ವಿಚಿತ್ರವಾಗಿದೆ.
ಪರಿಸರ ಸ್ನೇಹಿ ಗಣೇಶನ ಮೂರ್ತಿ ಸ್ಥಾಪನೆ, ಪೂಜೆಯ ವಿಚಾರದಲ್ಲಿ ಉತ್ಸವವನ್ನು ಹೇಗೆ ಮಾಡಬೇಕೆಂದು ಮಾದರಿಯಾಗಿರುವ ಅರಣ್ಯ ಇಲಾಖೆ, ವಿಸರ್ಜನಾ ಮೆರವಣಿಗೆಯಲ್ಲಿ ಮಾತ್ರ ಹೇಗೆ ಮಾಡಬಾರದೆಂಬುದಕ್ಕೆ ಮಾದರಿಯಾಗಿದೆ.
ಡಿಜೆಗೆ ಅನುಮತಿ ಇಲ್ಲದಿದ್ದರೂ ಅರಣ್ಯ ಇಲಾಖೆಯವರು ಡಿಜೆ ಬಳಸಿದ್ದಾರೆಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿಪಿಐ ರಮೇಶ ಹಾನಾಪುರ, ತಾಲೂಕಿನಲ್ಲಿ ಡಿಜೆ ಬಳಕೆಗೆ ಅನುಮತಿ ನೀಡಿಲ್ಲ, ಅರಣ್ಯ ಇಲಾಖೆಯ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಭೇಟಿ ನೀಡಿದ್ದೇನೆ, ಅವರು ಬಳಸಿದ್ದು ಡಿಜೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅರಣ್ಯ ಇಲಾಖೆಯವರೂ ತಾವು ಬಳಸಿದ್ದು ಡಿಜೆ ಅಲ್ಲ, ಅದು ಸೌಂಡ್ ಬಾಕ್ಸ್ ಮಾತ್ರ ಎಂದು ಸಮಜಾಯಿಷಿ ನೀಡಿದ್ದಾರೆ. ಏನೇ ಆದರೂ ಮಿತಿ ಮೀರಿದ ಶಬ್ದದೊಂದಿಗೆ ಸಂಬಂಧವೇ ಇಲ್ಲದ ಹಾಡುಗಳೊಂದಿಗೆ ವಿಸರ್ಜನಾ ಮೆರವಣಿಗೆ ನಡೆದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.







