ಯಲ್ಲಾಪುರ ತಾಲೂಕಿನ ಮಲವಳ್ಳಿಯ ರಾಮಲೀಲಾ ಬಯಲು ರಂಗದ ಮಂದಿರದಲ್ಲಿ ಶಿವನಾದ ಕಲಾ ಸೌರಭ ಹಾಗೂ ಶ್ರೀ ರಾಮಲಿಂಗದೇವ ಯುವಕ ಮಂಡಳದವರಿಂದ ಭೃಗು ಲಾಂಛನ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ಶರಣಯ್ಯ ಬೇಗೂರ ತಂಡದ ಹಿನ್ನೆಲೆ ಸಂಗೀತ, ಪ್ರಸಾದ ಹಳ್ಳಿ ಮತ್ತು ಸುಬ್ರಾಯ ಪಿ.ಕೆ ಅವರ ರಂಗ ಸಹಕಾರದೊಂದಿಗೆ ಸ್ಥಳೀಯ ಕಲಾವಿದರೇ ಮನೋಜ್ಞವಾಗಿ ಅಭಿನಯಿಸುವ ಮೂಲಕ ನಾಟಕ ಪ್ರದರ್ಶನವನ್ನು ಯಶಸ್ವಿಗೊಳಿಸಿದರು.
ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ನಾಟಕ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ನಾಟಕ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಕೃತಿಯನ್ನು ಸಿದ್ಧಪಡಿಸಿದ ರಾಜಾರಾಮ ಗಾಂವ್ಕರ ಅವರನ್ನು ಗೌರವಿಸಲಾಯಿತು.
ಪೌರಾಣಿಕ ನಾಟಕಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಕಳೆದ ಆರು ವರ್ಷಗಳಿಂದ ಮಲವಳ್ಳಿಯಲ್ಲಿ ರಾಜಾರಾಮ ಗಾಂವ್ಕರ ನೇತೃತ್ವದಲ್ಲಿ ನಿರಂತರವಾಗಿ ಪೌರಾಣಿಕ ನಾಟಕಗಳನ್ನು ಮಾಡುತ್ತ ಬಂದಿದ್ದಾರೆ. ರಾಜಾರಾಮ ಅವರು ಪ್ರತಿ ವರ್ಷ ಪೌರಾಣಿಕ ಕಥೆಯೊಂದನ್ನು ಆಯ್ದುಕೊಂಡು, ಅದನ್ನು ರಂಗಕ್ಕೆ ಬೇಕಾದ ರೀತಿಯಲ್ಲಿ ಬರೆದು, ಪುಸ್ತಕ ರೂಪದಲ್ಲಿ ಹೊರತರುತ್ತಾರೆ. ನಾಟಕದ ನಿರ್ದೇಶನದೊಂದಿಗೆ, ಪಾತ್ರವನ್ನೂ ನಿರ್ವಹಿಸುತ್ತಾರೆ. ಕಲೆಯ ಮೇಲಿನ ಈ ಶೃದ್ಧೆಯನ್ನು ಗುರುತಿಸಿ, ಅವರನ್ನು ಗೌರವಿಸಲಾಯಿತು.
ಮಾವಿನಮನೆ ಗ್ರಾ.ಪಂ ಅಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ, ಮಾವಿನಮನೆ ವಿವಿಧೋದ್ದೇಶ ಸಹಕಾರಿಯ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಪ್ರಮುಖರಾದ ಸದಾನಂದ ಭಟ್ಟ, ಎಸ್.ವಿ.ಭಟ್ಟ, ಪ್ರಸಾದ ಹಳ್ಳಿ, ಮಾಚಣ್ಣ ವರದ, ಗಣೇಶ ಹೆಗಡೆ ಇತರರಿದ್ದರು.







