ಯಲ್ಲಾಪುರ ತಾಲೂಕಿನ ಕ್ರಿಯಾಶೀಲ ಶಿಕ್ಷಕಿ, ಸಾಹಿತಿ ಶಿವಲೀಲಾ ಹುಣಸಗಿ ಅವರಿಗೆ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಸವಲೀಲಾ 1998 ರಲ್ಲಿ ಶಿಕ್ಷಕರಾಗಿ ಹುಣಶೆಟ್ಟಿಕೊಪ್ಪ ಶಾಲೆಗೆ ಸೇರಿ ಹತ್ತು ವರ್ಷ ಸೇವೆ ಸಲ್ಲಿಸಿದರು. ನಂತರ ಮದನೂರು ಕ್ಲಸ್ಟರ್ ಸಿ ಆರ್ ಪಿ ಆಗಿ, ಯಲ್ಲಾಪುರ ಕ್ಲಸ್ಟರ್ ಮೂರರ ಸಿ ಆರ್ ಪಿ ಆಗಿ ಸೇವೆ ಸಲ್ಲಿಸಿದರು. 2014 ರಿಂದ ಅರಬೈಲ್ ಶಾಲೆಯ ಶಿಕ್ಷಕರಾಗಿ, ಪ್ರಸ್ತುತ ಅದೇ ಶಾಲೆಯ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುಣಾತ್ಮಕ ಶಿಕ್ಷಣ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅರ್ಥಪೂರ್ಣವಾಗಿ ಮಕ್ಕಳಿಗೆ ಪಾಠ ಮಾಡುವ ಮೂಲಕ ಗಮನಸೆಳೆದಿದ್ದಾರೆ.
ಶಾಲೆಯ ಸುಧಾರಣೆ, ಸಮುದಾಯದ ಒಳಗೊಳ್ಳುವಿಕೆ, ಮಕ್ಕಳ ಕಲಿಕಾ ಮಟ್ಟವನ್ನು ಎತ್ತರಿಸಲು ಗಮನಾರ್ಹ ಕೆಲಸ ಮಾಡುತ್ತ ಬಂದಿದ್ದಾರೆ. ಮಕ್ಕಳ ಸಾಹಿತ್ಯಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲು ಚಿಣ್ಣರ ಕಲರವ ಪುಸ್ತಕ ಪ್ರಕಟಿಸುವ ಮೂಲಕ ಮಾದರಿಯಾಗಿದ್ದಾರೆ.
ಸಾಹಿತಿಯಾಗಿ ಬಿಚ್ಚಿಟ್ಟ ಮನ, ಬದುಕೆಂದ್ರೆ ಹೀಗೇನಾ, ಗೋರಿಯ ಸುತ್ತ ಸಪ್ತಪದಿ ತುಳಿದಾಗ, ಗಿರಿನವಿಲ ನೆನಪುಗಳು, ಬಾಂಧವ್ಯದ ಮೆರಗು, ಬೊಗಸೆಯೊಳಗಿನ ಆಕಾಶ, ಸಕಾಲ, ಬೇಲಿಯಾಚೆಗಿನ ಪಿಸುಮಾತು, ಚಿಣ್ಣರ ಕವಿತೆಗಳು, ಸಂಕಲ್ಪೋತ್ಸವ ಕನ್ನಡ ಕವಿತೆಗಳು ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಇವರ ಸಾಧನೆಗೆ ಅನುಪಮಾ ಸೇವಾ ಪ್ರಶಸ್ತಿ, ಸೇವಾದಳ ಶಾಖಾ ನಾಯಕಿ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪುರಸ್ಕಾರ, ವಾಯವ್ಯ ಸಾರಿಗೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಉತ್ತಮ ನಿರೂಪಕಿ ಪ್ರಶಸ್ತಿ, ಯುಗ ದರ್ಶನಿ ರಾಜ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ, ಪುಸ್ತಕ ದತ್ತನಿಧಿ ಪ್ರಶಸ್ತಿ, ಗುರುಕುಲ ತಿಲಕ ರಾಜ್ಯ ಪ್ರಶಸ್ತಿ, ವರ್ಡ ಪ್ರೆಸ್ ಬುಕ್ ಆಫ್ ರೆಕಾರ್ಡ್, ಹೆಮ್ಮೆಯ ಕನ್ನಡತಿ ರಾಜ್ಯ ಪ್ರಶಸ್ತಿ, ಶಿಕ್ಷಕ ಚಿನ್ಮಯ ರಾಜ್ಯ ಪ್ರಶಸ್ತಿಗಳು ಸಂದಿವೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾಗಿರುವ ಶಿವಲೀಲಾ ಅವರು ಸಮ್ಮೇಳನ, ಗೋಷ್ಠಿ, ಸಾಹಿತ್ಯಿಕವಾದ ನೂರಾರು ಕಾರ್ಯಕ್ರಮಗಳ ಸಂಘಟನೆ ಮೂಲಕ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ.







