ಯಲ್ಲಾಪುರ ತಾಲೂಕಿನ ಮದನೂರು ಗ್ರಾ.ಪಂ ವ್ಯಾಪ್ತಿಯ ಸ ಹಿ ಪ್ರಾ ಶಾಲೆ ಅಲ್ಕೇರಿ ಗೌಳಿವಾಡ ಶಾಲೆಯ ಶಿಕ್ಷಕ, ಕವಿ ಗಂಗಾಧರ ಲಮಾಣಿ ಅವರಿಗೆ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.
ಮೂಲತಃ ಬೆಳಬಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬನ್ನೂರ ತಾಂಡಾದವರಾದ ಗಂಗಾಧರ 2003 ರಲ್ಲಿ ಕಿರವತ್ತಿಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ,ಮಂಗನತಾವರೆಗೇರಿ, ಕರಿಯವ್ವನಗುಂಡಿ, ಜೋಗಿಕೊಪ್ಪ, ಕೋಣನಮಡ್ಡಿಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಅಲ್ಕೇರಿ ಗೌಳಿವಾಡ ಮತ್ತು ತೆಂಗಿನಗೇರಿ ಪ್ರಭಾರೆ ಮುಖ್ಯಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೋಧನೆಯಲ್ಲಿ ಸದಾ ಕ್ರಿಯಾತ್ಮಕ, ನಾವಿನ್ಯ ಚಟುವಟಿಕೆ ಯಿಂದ, ಭಾರತ ಸೇವಾದಳದ ಚಟುವಟಿಕೆಯಿಂದ,
ಹಿಂದುಳಿದ ಗೌಳಿ ಸಮುದಾಯದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ. ಬುಡಕಟ್ಟು ಸಮುದಾಯದವರೊಡಗೂಡಿ,ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಗುಣಾತ್ಮಕ ಕಲಿಕೆಗೆ ಶೃಮಿಸುತ್ತಿದ್ದಾರೆ.
ಸಾಹಿತಿಯಾಗಿರುವ ಗಂಗಾಧರ ತಾಲೂಕು , ಜಿಲ್ಲಾ, ರಾಜ್ಯಮಟ್ಟದ ಕವಿಗೋಷ್ಠಿ, ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಕಲಿ ಕಲಿಸು ಕಾರ್ಯಕ್ರಮದಡಿ ಕೇರಳ, ಮಹಾರಾಷ್ಟ್ರ ರಾಜ್ಯ, ಅಂತರ್ ರಾಜ್ಯ ಮಟ್ಟದ ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಗೌಳಿಗರ ವಲಸೆಯ ಅನುಭವಗಳನ್ನು ಮಕ್ಕಳಿಂದ ಸಂಗ್ರಹಿಸಿ ‘ಪಯಣ’ ಕಥಾ ಸಂಕಲನ ಕೃತಿ ಪ್ರಕಟಿಸಿದ್ದಾರೆ.
2022 ರಲ್ಲಿ ಇವರು ತೆಂಗಿನಗೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆಗೊಂಡರು. ಯಾವ ವ್ಯವಸ್ಥೆ ಇಲ್ಲದೇ ಹಳೆಯ ಮನೆಯೊಂದರಲ್ಲಿ ಆರಂಭವಾದ ಶಾಲೆ ಅದು. ಸಮುದಾಯದ ಜಾಗದಲ್ಲಿ ಅವರ ವಿಶ್ವಾಸ ಗಳಿಸಿಕೊಂಡು ಐದರಿಂದ ಆರು ಲಕ್ಷದಲ್ಲಿ ಒಂದು ಸುಂದರವಾದ ಶಾಲಾ ಕಟ್ಟಡ ಮತ್ತು ಅಕ್ಷರ ದಾಸೋಹದ ಕೊಠಡಿಯನ್ನು ನಿರ್ಮಿಸಿಕೊಂಡು, ತರಗತಿಗಳನ್ನು ಪ್ರಾರಂಭಿಸುವಲ್ಲಿ ಗಂಗಾಧರ ಅವರ ಪಾತ್ರ ದೊಡ್ಡದು. ಈಗ 2025 -26 ನೇ ಸಾಲಿನಲ್ಲಿ ಸುಂದರವಾದ ಇಲಾಖಾ ಕಟ್ಟಡ ನಿರ್ಮಾಣಗೊಂಡಿದೆ.







