ಅಡಕೆ ತೋಟ ಕಾಯುವ ವ್ಯಕ್ತಿ ಬಗಲಿಗೆ ಹಾಕಿಕೊಂಡಿದ್ದ ಏರ್ ಗನ್ ನ ಟ್ರಿಗರ್ ನ್ನು ಬಾಲಕನೋರ್ವ ಒತ್ತಿ, ಎದುರು ನಿಂತಿದ್ದ ಇನ್ನೊಬ್ಬ ಬಾಲಕನಿಗೆ ಬಡಿದು ಸಾವನ್ನಪ್ಪಿದ ಘಟನೆ ಶಿರಸಿ ತಾಲೂಕಿನ ಸೋಮನಳ್ಳಿಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಕರಿಯಪ್ಪ ಎಂಬ 9 ವರ್ಷ ಬಾಲಕ ಮೃತಪಟ್ಟ ದುರ್ದೈವಿ. ಮೂಲತಃ ಹಾವೇರಿ ಜಿಲ್ಲೆಯ ತಿಪಟೂರಿನವರಾದ ಬಾಲಕನ ಕುಟುಂಬ ಸೋಮನಳ್ಳಿಯ ರಾಘವ ಹೆಗಡೆ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಶಾಲೆಗೆ ರಜೆ ಇದ್ದ ಕಾರಣ ಮಕ್ಕಳು ರಾಘವ ಹೆಗಡೆ ಅವರ ಮನೆ ಮುಂದೆ ಆಟವಾಡಿಕೊಂಡಿದ್ದರು.
ಈ ವೇಳೆ ನಿತೀಶ ಎಂಬವರು ತೋಟ ಕಾಯುವ ಸಲುವಾಗಿ ಏರ್ ಗನ್ ಹಿಡಿದು ಮನೆಯಂಗಳಕ್ಕೆ ಬಂದಿದ್ದರು. ಆಟವಾಡುತ್ತಿದ್ದ ಬಾಲಕರು ಏರ್ ಗನ್ ನ ಟ್ರಿಗರ್ ಜಗ್ಗಿಬಿಟ್ಟಿದ್ದಾರೆ. ಗುಂಡು ಎದುರು ನಿಂತಿದ್ದ ಬಾಲಕನ ಎದೆಗೆ ಬಡಿದು ಆತ ಅಲ್ಲಿಯೇ ಬಿದ್ದಿದ್ದಾನೆ.
ತಕ್ಷಣವೇ ಬಾಲಕನನ್ನು ಶಿರಸಿಯಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ







