ಯಲ್ಲಾಪುರ ತಾಲೂಕಿನ ಹೊಸಳ್ಳಿಯ ದಾಂಡೇಲಿವಾಡದಲ್ಲಿ ಅಕ್ರಮವಾಗಿ ಜಮೀನಿಗೆ ಪ್ರವೇಶಿಸಿ ಮಾವಿನಹಣ್ಣು ಕೊಯ್ದದ್ದಲ್ಲದೇ, ಎಮ್ಮೆಯನ್ನೂ ಜಮೀನಿಗೆ ಮೇಯಲು ಬಿಟ್ಟು ಬೆಳೆ ಹಾಳು ಮಾಡಿದ ವಿಚಾರ ಹೊಡೆದಾಟದ ಹಂತಕ್ಕೆ ತಲುಪಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮೂರು ತಿಂಗಳುಗಳಿಂದ ನಡೆಯುತ್ತಿದ್ದ ಈ ಗಲಾಟೆ ಈಗ ಜೋರಾಗಿದೆ.
ದಾಂಡೇಲಿವಾಡದಲ್ಲಿ ಗೋಯಾ ಬಾಬು ಅಡೋಳಕರ್ ಎಂಬವರ ತಂದೆಯವರ ಹೆಸರಿಗೆ ಸೇರಿದ ಜಿ.ಪಿ.ಎಸ್ ಆಗಿರುವ ಅತಿಕ್ರಮಣ ಜಮೀನಿದೆ. ಬೈಲಂದೂರು ಗೌಳಿವಾಡದ ಬಕ್ಕು ದೋಂಡು ತೋರತ್, ಬಾಬು ದೋಂಡು ತೋರತ್, ಜಿಲ್ಲು ದೋಂಡು ತೋರತ್ ಹಾಗೂ ಜನ್ನು ಬಾಬು ತೋರತ್ ಎಂಬವರು ಆ ಜಮೀನಿಗೆ ಅತಿಕ್ರಮವಾಗಿ ಪ್ರವೇಶಿಸುತ್ತಿದ್ದರು. ಜಮೀನಿನಲ್ಲಿದ್ದ ಮಾವಿನಹಣ್ಣುಗಳನ್ನು ಕೊಯ್ದುಕೊಂಡು ಹೋಗಿದ್ದಾರೆ.
ಜತೆಗೆ ತಮ್ಮ ಎಮ್ಮೆಯನ್ನೂ ಜಮೀನಿಗೆ ಮೇಯಲು ಬಿಟ್ಟು ಬೆಳೆಯನ್ನೂ ಹಾನಿ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.
ಕಳೆದ ಸೆಪ್ಟೆಂಬರ್ 5 ರಂದು ಗೋಯಾ ಅವರ ತಾಯಿ ಜಮೀನಿನಲ್ಲಿ ಕಟ್ಟಿ ಹಾಕಿದ್ದ ದನಗಳಿಗೆ ಹುಲ್ಲು ಹಾಕಲು ಹೋದಾಗ ಈ ನಾಲ್ವರು ಸೇರಿ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







