ಯಲ್ಲಾಪುರ ತಾಲೂಕಿನ ಆನಗೋಡ ಸಮೀಪದ ಹಸರಪಾಲಿನಲ್ಲಿ ಯಕ್ಷ ಸಂಸ್ಕೃತಿ ಪರಿವಾರದ ವಾರ್ಷಿಕೋತ್ಸವದ ಪ್ರಯುಕ್ತ ಹವ್ಯಕ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. 53 ಮಕ್ಕಳು ಈ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
1 ರಿಂದ 4 ನೇ ತರಗತಿ ಮಕ್ಕಳಿಗಾಗಿ ನಡೆದ ಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆಯಲ್ಲಿ ಶ್ರೀಹರಿ ಕರುಮನೆ ಪ್ರಥಮ, ಅಪರ್ಣ ಭಟ್ಟ ದ್ವಿತೀಯ ಹಾಗೂ ಅರ್ಪಿತಾ ಹೆಗಡೆ ತೃತೀಯ ಸ್ಥಾನ ಪಡೆದರು.
ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ನಡೆದ ವಾಲ್ಮೀಕಿ ರಾಮಾಯಣ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಹತಿ ಮೆಣಸುಮನೆ ಪ್ರಥಮ, ಹರ್ಷ ಭಾವೀಮನೆ ದ್ವಿತೀಯ, ಪ್ರಹ್ಲಾದ ಭಟ್ಟ ತೃತೀಯ ಬಹುಮಾನ ಪಡೆದರು. ಪ್ರೌಢಶಾಲೆ ಮಕ್ಕಳಿಗಾಗಿ ನಡೆದ ವ್ಯಾಸ ವಿರಚಿತ ಮಹಾಭಾರತ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾವನಾ ಜಡ್ಡಿಪಾಲ ಪ್ರಥಮ, ಅಚ್ಯುತ ಭಟ್ಟ ಅಣಲಗಾರ ದ್ವಿತೀಯ, ಅದಿತಿ ಭಟ್ಟ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು.
ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲ 53 ಮಕ್ಕಳಿಗೆ ಪ್ರಶಂಸಾ ಪತ್ರ ನೀಡಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ವೈದಿಕ ವೇ.ವಿಘ್ನೇಶ್ವರ ಭಟ್ಟ ಬಿಸಗೋಡ ಹಾಗೂ ಕಲಾವಿದ, ಶಿಕ್ಷಕ ಸತೀಶ ಯಲ್ಲಾಪುರ ಅವರನ್ನು ಯಕ್ಷ ಸಂಸ್ಕೃತಿ ಪರಿವಾರದ ವತಿಯಿಂದ ಸನ್ಮಾನಿಸಲಾಯಿತು. ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀಲತಾ ಮೆಣಸುಮನೆ ಹಾಗೂ ನಮೃತಾ ಕನ್ನಡಗಲ್ ಪ್ರಾರ್ಥಿಸಿದರು. ಮಹೇಶ ಭಟ್ಟ ಹಸರಪಾಲ ಸ್ವಾಗತಿಸಿದರು. ಶ್ರೀರಾಮ ಲಾಲಗುಳಿ ನಿರ್ವಹಿಸಿದರು. ನಂತರ ಯಕ್ಷ ಸಂಸ್ಕೃತಿ ಪರಿವಾರದ ಮಕ್ಕಳಿಂದ ಸತ್ಯ ಹರಿಶ್ಚಂದ್ರ ತಾಳಮದ್ದಲೆ ನಡೆಯಿತು.







