ನಗರ ಪಾಲಿಕೆ ಮಂಡಳಿಗಳ ಅವಧಿ ಮುಗಿಯುವವರೆಗೆ ಸರ್ಕಾರವು ಆಡಳಿತಾಧಿಕಾರಿಗಳನ್ನು ನೇಮಿಸದೇ ಇರುವಂತೆ ಹೈಕೋರ್ಟ್ ಸರ್ಕಾರಕ್ಕೆ ತಾತ್ಕಾಲಿಕ ನಿರ್ದೇಶನ ನೀಡಿದೆ.
ಇದರಿಂದ ಹಾಲಿ ಸದಸ್ಯರ ಪಾಲಿಗೆ ಅವಧಿ ಇನ್ನಷ್ಟು ಮುಂದುವರಿಯಬಹುದೆಂಬ ನಿರೀಕ್ಷೆ ಉಂಟಾಗಿದ್ದರೆ, ಹೊಸದಾಗಿ ಸ್ಥಳೀಯ ಆಡಳಿತದ ಸದಸ್ಯತ್ವಕ್ಕಾಗಿ ಸ್ಪರ್ಧಿಸುವ ಉತ್ಸಾಹದಲ್ಲಿದ್ದವರಿಗೆ ಸ್ವಲ್ಪ ಮಟ್ಟಿನ ನಿರಾಸೆ ಮೂಡಿಸಿದೆ.
ಪ್ರಸ್ತುತ ಅಧಿಕಾರದಲ್ಲಿರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರು, ಚುನಾವಣೆಯಲ್ಲಿ ಆಯ್ಕೆಯಾಗಿ ಎರಡು ವರ್ಷಗಳ ನಂತರ ಅಧಿಕಾರ ಪಡೆದಿದ್ದರು. ಮೊದಲ ಅಧ್ಯಕ್ಷರ ಅವಧಿ ಮುಗಿದು, ಎರಡನೇ ಅವಧಿಯ ಅಧ್ಯಕ್ಷರ ಮೀಸಲಾತಿ ಪ್ರಕಟಿಸಲು ಮತ್ತೆ 14 ತಿಂಗಳು ಕಾಯಬೇಕಾಯಿತು. ಸದಸ್ಯತ್ವದ ಈ ಅವಧಿಯಲ್ಲಿ ಸುಮಾರು 40 ತಿಂಗಳುಗಳ ಕಾಲ ಯಾವುದೇ ಅಧಿಕಾರ ಇಲ್ಲದೇ, ನೆಪ ಮಾತ್ರದ ಸದಸ್ಯರಾಗಿ ಇರಬೇಕಾದ ವಿಚಿತ್ರವಾದ ಸ್ಥಿತಿ ಇತ್ತು.
ಈಗ ನವೆಂಬರ್ 8 ರಂದು ಅವಧಿ ಮುಗಿಯಲಿದೆ. ಮೂರು ವರ್ಷಕ್ಕೂ ಹೆಚ್ಚು ಕಾಲ ಅಧಿಕಾರವೇ ಇಲ್ಲದೇ, ಜನರಿಂದ ಉಗಿಸಿಕೊಳ್ಳುವ ಸದಸ್ಯರಾಗಿ ಇದ್ದ ನಿರಾಸೆ ಅವರದು. ಎರಡನೇ ಅವಧಿಯ ಅಧ್ಯಕ್ಷ ಅಧಿಕಾರ ಸ್ವೀಕಾರವಾಗಿ ಎರಡೂವರೆ ವರ್ಷ ಪೂರ್ಣಗೊಳ್ಳುವವರೆಗೆ ಚುನಾವಣೆ ನಡೆಯಬಾರದು. ಹಾಗಾಗಿ ಈ ಅವಧಿಯನ್ನು ಎರಡೂವರೆ ವರ್ಷ ಪೂರ್ಣಗೊಳ್ಳಲು ಬಾಕಿ ಇರುವ 14 ತಿಂಗಳುಗಳ ಕಾಲ ಮುಂದುವರಿಸಬೇಕೆಂದು ಸ್ಥಳೀಯ ಆಡಳಿತದ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಯಲ್ಲಾಪುರ, ಕಾರವಾರ, ಕುಮಟಾ, ಅಂಕೋಲಾ, ಹೊನ್ನಾವರ ಮುಂತಾದ ನಗರ ಆಡಳಿತದ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಾದ ಆಲಿಸಿದ ನ್ಯಾಯಾಲಯ ತಾತ್ಕಾಲಿಕವಾಗಿ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಿದೆ.
ಅಕ್ಟೋಬರ್ 16 ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದ್ದು, ಅಲ್ಲಿಯವರೆಗೆ ಆಡಳಿತಾಧಿಕಾರಿಗಳ ನೇಮಕ ಅಥವಾ ಚುನಾವಣೆ ನಡೆಸುವ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.







