ಯಲ್ಲಾಪುರ ತಾಲೂಕಿನ ಮಾವಿನಕಟ್ಟಾ ಸಮೀದ ಬೆಳ್ಳಂಬಿಯಲ್ಲಿ ಮಗನೇ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ.
ಬೆಳ್ಳಂಬಿಯ ನಾರಾಯಣ ಪರಶುರಾಮ ಮರಾಠಿ(51) ಮೃತ ವ್ಯಕ್ತಿ. ಮೃತನ ಪುತ್ರ ಹರೀಶ ನಾರಾಯಣ ಮರಾಠಿ ಕೊಲೆಗೈದ ವ್ಯಕ್ತಿ. ಕಸ ಗುಡಿಸುವಾಗ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಹರೀಶ ವಿರುದ್ಧ ಕ್ರಮಕ್ಕಾಗಿ ಮೃತನ ಪುತ್ರಿ ತಾರಾ ಮರಾಠಿ ದೂರು ನೀಡದ್ದಾರೆ.
ತಾರಾ ಹಾಗೂ ಈಕೆಯ ಅಣ್ಣ ಹರೀಶ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದು, ಹರೀಶನ ಹೆಂಡತಿ ಸವಿತಾ ಹಾಗೂ ತಾರಾಗೆ ಆಗಾಗ ಜಗಳ ನಡೆಯುತ್ತಿತ್ತು. ಅದರಂತೆ ಶನಿವಾರ ಸಂಜೆ ಮನೆಯ ಅಂಗಳದಲ್ಲಿ ಕಸ ಕುಡಿಸುವಾಗ ಆರಂಭವಾದ ಜಗಳ, ರಾತ್ರಿ ಅಡಿಗೆ ಮಾಡುವಾಗಲೂ ಮುಂದುವರಿದಿದೆ. ಜಗಳ ತಾರಕಕ್ಕೇರಿ ಅಣ್ಣ ಹರೀಶ, ತಂಗಿ ತಾರಾಳ ಕೆನ್ನೆಗೆ ಹೊಡೆದಿದ್ದಾನೆ.
ಇದರಿಂದ ರಕ್ತ ಬಂದಿದ್ದು, ಗಾಯಗೊಂಡ ಆಕೆ ಈ ವಿಷಯವನ್ನು ಹೊಲದಿಂದ ಬಂದ ತಂದೆ ನಾರಾಯಣ ಮರಾಠಿ ಅವರಿಗೆ ತಿಳಿಸಿದ್ದಾರೆ. ಆಗ ಅವರು ಕಂಪ್ಲೇಟ್ ಕೊಟ್ಟು ಬರುವುದಾಗಿ ಅಪ್ಪ ಹೇಳಿ ಹೊರಡುತ್ತಿದ್ದಂತೆ, ತಂದೆಯನ್ನು ಬೈಯ್ಯತೊಡಗಿದ ಅಣ್ಣ, ಮನೆ ಕಟ್ಟಿ, ಮದುವೆ ಮಾಡಿದ್ದು ನಾನೇ, ಆದರೂ ನನಗೆ ಆಸ್ತಿಯಲ್ಲಿ ಪಾಲು ನೀಡಿಲ್ಲ, ಮನೆಯಿಂದ ಹೊರ ಹೋಗು ಎನ್ನುತ್ತೀರಿ, ಎಲ್ಲವೂ ಸಾಕಾಗಿ ಹೋಗಿದೆ, ಈ ದಿನ ಎಲ್ಲವನ್ನೂ ಮುಗಿಸುತ್ತೇನೆ’ ಎಂದು ಕೊಡಲಿಯಿಂದ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ. ತಂದೆ ಎಚ್ಚರ ತಪ್ಪಿ ಬೀಳುತ್ತಿದ್ದಂತೆ ಕೊಡಲಿಯೊಂದಿಗೆ ನಾಪತ್ತೆಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ನಾರಾಯಣ ಮರಾಠಿ ಅವರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಮೊದಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







