ವಾಹನದಲ್ಲಿ ಹೋಗುತ್ತಿರುವವರು `ಕವಳ’ (ಎಲೆ-ಅಡಿಕೆ) ಉಗಿದರೆ ಏನು ಮಾಡಬೇಕು? ಇಂಥಹ ಪ್ರಶ್ನೆ ಇದೀಗ ಸರ್ಕಾರಕ್ಕೂ ಕಾಡುತ್ತಿದೆ!
ಈ ಜಾಗತಿಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದ ಸಾರಿಗೆ ಇಲಾಖೆ ಆ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟಿ ಕೈ ತೊಳೆದುಕೊಂಡಿದೆ. ಶಿರಸಿಯ ವೈದ್ಯ ಡಾ ರವಿಕಿರಣ ಪಟವರ್ದನ್ ಈ `ಸಾಮಾಜಿಕ ಸಮಸ್ಯೆ’ಯನ್ನು ಮೊದಲ ಬಾರಿಗೆ ಎತ್ತಿ ಹಿಡಿದಿದ್ದಾರೆ. ಎರಡು ತಿಂಗಳ ಹಿಂದೆ ಅವರು ಶುದ್ಧವಾದ ಬಟ್ಟೆ ಧರಿಸಿ ಬ್ಯಾಂಕಿಗೆ ಹೋಗುತ್ತಿದ್ದರು. ಆಗ ಬೈಕಿನಲ್ಲಿ ಹೋಗುತ್ತಿದ್ದವನೊಬ್ಬ ಅವರ ಮೇಲೆ `ಕವಳ’ ಉಗಿದಿದ್ದ. ಇದರಿಂದ ಇಡೀ ಮೈ ಕೆಂಪಾಗಿತ್ತು. ಆತನಿಗೂ ಹಿಂತಿರುಗಿ ಉಗಿಯುವ ಎಂದರೆ ವೈದ್ಯರ ಬಾಯಲ್ಲಿ ಕವಳವೇ ಇರಲಿಲ್ಲ!
ಒಮ್ಮೆ ಡಾ ರವಿಕಿರಣ ಪಟವರ್ಧನ್ ಅವರು ದೇವಾಲಯದ ಸಾಲಿನಲ್ಲಿದ್ದಾಗ ನೆಲಪೂರ್ತಿ ಕವಳದಿಂದ ಕೆಂಪಾಗಿದ್ದನ್ನು ಗಮನಿಸಿದ್ದರು. `ಜ್ವರ ಬಂದ ಸೀನಿದಾಗ ಎದುರುಗಿರುವ ವ್ಯಕ್ತಿಗೂ ಶೀತ-ನೆಗಡಿ ಹರಡುವ ಹಾಗೇ ಈ ಕವಳ ತೂಪುವುದರಿಂದ ಸಹ ರೋಗ ಹರಡುವುದು ಸತ್ಯ’ ಎಂದು ಸ್ವತಃ ವೈದ್ಯರಾಗಿರುವ ಡಾ ಪಟವರ್ದನ್ ವಿವರಿಸುತ್ತಾರೆ. `ಬೇರೆಯವರ ಬಾಯಿಂದ ಬಿದ್ದ ಕವಳದಿಂದ ಹಲವು ರೋಗ ಹರಡುವ ಸಾಧ್ಯತೆಯಿದ್ದು, ಜನ ಜಾಗೃತಿ ಮಾತ್ರ ಇದಕ್ಕೆ ಪರಿಹಾರ’ ಎಂಬುದು ಅವರ ಅಭಿಪ್ರಾಯ.
ವೃತ್ತಿಯಲ್ಲಿ ವೈದ್ಯರಾಗಿರುವ ಅವರು ಈ ಸಾಮಾಜಿಕ ರೋಗಕ್ಕೆ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಪತ್ರ ಚಳುವಳಿ ಮೂಲಕ ಆಂದೋಲನ ನಡೆಸಿದ್ದಾರೆ. `ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ಅಡಿ ಬದಲಾವಣೆ ತಂದು ಈ ರೀತಿ ವರ್ತಿಸುವವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಬೇಕು. ಎಲ್ಲೆಂದರಲ್ಲಿ ಉಗುಳುವ ಮಾನಸಿಕತೆ ದೂರವಾಗಬೇಕು’ ಎಂಬುದು ಸಭ್ಯ ಕವಳ ಪ್ರಿಯರ ಮಾತಾಗಿದೆ.





Discussion about this post