ಶಿರಸಿ: ಹುಲೆಕಲ್’ನ ಹೆಂಚರ್ಟಾದ ಅಬ್ಲುಲ್ ಗಫಾರ್ ಸಾಬ್ ಹಾಗೂ ಆತನ ಇಬ್ಬರು ಸಹಚರರು ದುಬೈ’ನಲ್ಲಿ ಅಂಗಡಿ ಕೊಡಿಸುವುದಾಗಿ ನಂಬಿಸಿ ಮಂಗಳೂರಿನ ಮಹಮದ್ ರಫಿಕ್ (55) ಎಂಬಾತರಿoದ 34 ಲಕ್ಷ ರೂ ಪಡೆದು ಯಾಮಾರಿಸಿದ್ದಾರೆ.
ಮಂಗಳೂರಿನ ಹಂಪಿನಕಟ್ಟಾ ಬಳಿ ವಾಸವಾಗಿರುವ ಮಹಮದ್ ರಫಿಕ್ ದುಬೈ’ಗೆ ತೆರಳುವ ಕನಸು ಕಂಡಿದ್ದರು. ಅಲ್ಲಿ ಅಂಗಡಿ ನಡೆಸಿ ಬದುಕುವ ಬಗ್ಗೆ ಸಾಕಷ್ಟು ಯೋಚನೆ ಮಾಡಿದ್ದರು. ಹೀಗಿರುವಾಗ ದುಬೈ’ನಲ್ಲಿ ಅಂಗಡಿ ಕೊಡಿಸುವುದಾಗಿ ನಂಬಿಸಿದ ಶಿರಸಿ ಹುಲೆಕಲ್’ನ ಹೆಂಚರ್ಟಾದ ಅಬ್ಲುಲ್ ಗಫಾರ್ ಸಾಬ್ ಇದಕ್ಕಾಗಿ 75 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅದರ ಪ್ರಕಾರ 35 ಲಕ್ಷ ರೂ ಮುಂಗಡ ಹಣ ನೀಡುವಂತೆ ತಾಕೀತು ಮಾಡಿದ್ದರು.
ಅವರ ಮಾತು ನಂಬಿದ ಮಹಮದ್ ರಫಿಕ್, ಅಬ್ಲುಲ್ ಗಫಾರ್ ಸಾಬ್ ಸೂಚಿಸಿದ ಪ್ರಕಾರ 2023ರ ಡಿಸೆಂಬರ್ 1ರಿಂದ 30 ಜೂನ್ 2024ರ ಅವಧಿಯಲ್ಲಿ ಅಬ್ದುಲ್ ರಹಮಾನ್ ಗಫಾರ್ ಎಂಬಾತರ ಖಾತೆಗೆ 10 ಲಕ್ಷ ರೂ ಹಾಕಿದ್ದರು. ಜೊತೆಗೆ ಅಬ್ಲುಲ್ ಗಫಾರ್ ಸಾಬ್ ತಿಳಿಸಿದ ಕಾರಣ ನಾಝಿರಿಯಾ ಮತೀನ್ ಎಂಬಾತರ ಖಾತೆಗೂ 20 ಲಕ್ಷ ರೂ ವರ್ಗಾಯಿಸಿದ್ದರು.
ಮಹಮದ್ ರಫಿಕ್ ತನ್ನ ಮಗ ರಮೀಜನ ಖಾತೆಯಿಂದ ಸಹ 4 ಲಕ್ಷ ರೂ ವರ್ಗಾಯಿಸಿದ್ದರು. ಆದರೆ, ಹುಲೇಕಲ್’ನ ಅಬ್ಲುಲ್ ಗಫಾರ್ ಸಾಬ್, ಅದೇ ಊರಿನವರಾದ ಅಬ್ದುಲ್ ರಹಮಾನ್ ಗಫಾರ್ ಹಾಗೂ ನಾಝಿರಿಯಾ ಮತೀನ್ ದುಬೈನಲ್ಲಿ ಅಂಗಡಿಯನ್ನು ಮಾತ್ರ ಕೊಡಿಸಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದರೂ ಉತ್ತರಿಸುತ್ತಿರಲಿಲ್ಲ. ಇದೀಗ ಮೋಸ ಹೋಗಿರುವುದನ್ನು ಅರಿತ ಮಹಮದ್ ರಫಿಕ್ ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ.






Discussion about this post