ಉತ್ತರ ಕನ್ನಡ ಜಿಲ್ಲಾ ಜಿಲ್ಲಾ ಗ್ಯಾರಂಟಿ (Guarantee) ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಸತೀಶ್ ಪಿ ನಾಯ್ಕ ಅಧ್ಯಕ್ಷ. ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಈಶ್ವರ ಕಾಂದೋ ಕಾರ್ಯದರ್ಶಿ. ಜೊತೆಗೆ 5 ಉಪಾಧ್ಯಕ್ಷರು ಈ ಸಮಿತಿಯಲ್ಲಿದ್ದು, 14 ಸದಸ್ಯರಿದ್ದಾರೆ. ಕಾರವಾರದ ಜಿಲ್ಲಾ ಪಂಚಾಯತದಲ್ಲಿನ ಕೊಠಡಿಯನ್ನು ಈ ಯೋಜನೆಯ ಕಚೇರಿಯನ್ನಾಗಿ ಮಾಡಲಾಗಿದೆ.
ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿನ `ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿ’ ಗುರುವಾರ ಉದ್ಘಾಟನೆಯಾಗಿದೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಇದನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು `ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಒಟ್ಟಾಗಿ ಶ್ರಮಿಸಿ ಪ್ರತಿಯೊಬ್ಬರಿಗೂ ತಲುಪಿಸಬೇಕು’ ಎಂದು ಸೂಚಿಸಿದರು. `ಪ್ರಾಧಿಕಾರದ ಪ್ರತಿಯೊಬ್ಬ ಸದಸ್ಯರಿಗೆ ಸರ್ಕಾರ ಜವಾಬ್ದಾರಿ ನೀಡಲಿದೆ. ಆ ಜವಾಬ್ದಾರಿಯನ್ನು ಅರಿತು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸಬೇಕು’ ಎಂದವರು ಹೇಳಿದರು.
`ಪ್ರಾಧಿಕಾರದ ಸದಸ್ಯರು ತಾಲೂಕುವಾರು ಸಭೆ ಸೇರಿ ಸ್ಥಳೀಯ ಅಸಾಯಕರು, ಬಡ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರಕಿಸಿಕೊಡಬೇಕು. ಜೊತೆಗೆ ಸರ್ಕಾರದ ಇತರೆ ಯೋಜನೆಗಳ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಪ್ರಯತ್ನಿಸಬೇಕು’ ಎಂದರು.





Discussion about this post