ಕಾರವಾರ: ಗಾಂಜಾ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಜೈಲಿನ ಒಳಗೆ ಮಾದಕ ವ್ಯಸನ ಸಿಕ್ಕಿಲ್ಲ. ಹೀಗಾಗಿ ಅವರು ಜೈಲಿನ ಒಳಗೆ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಲ್ಲಾದರೂ ತಂಬಾಕು ಸಿಗಬಹುದು ಎಂಬ ಆಶಾಭಾವನೆ ಅವರದ್ದು!
ಮದಮದ್ ಮುಜಾಮಿಲ್ ಹಾಗೂ ಫರಾನ್ ಚಬ್ಬಿ ಎಂಬಾತರು ಗಾಂಜಾ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ್ದರು. ಗಾಂಜಾ ವ್ಯಾಪಾರದ ಜೊತೆ ಸೇವನೆಯನ್ನು ಅವರು ರೂಡಿಸಿಕೊಂಡಿದ್ದು, ಜೈಲಿನಲ್ಲಿ ಅವರಿಗೆ ಅಗತ್ಯ ಮಾದಕ ವಸ್ತುಗಳು ಸಿಕ್ಕಿರಲಿಲ್ಲ. ಹೀಗಾಗಿ ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದರು. ಗುರುವಾರ ಜೈಲಿನ ವಾರ್ಡನ್ ಬಳಿ `ತಂಬಾಕನ್ನಾದರೂ ನೀಡಿ’ ಎಂದು ಅಂಗಲಾಚಿದ್ದರು. ಆದರೆ, ವಾರ್ಡನ್ ಇದಕ್ಕೆ ಸೊಪ್ಪು ಹಾಕಿರಲಿಲ್ಲ.
`ಜೈಲಿನಲ್ಲಿರುವ ನಟ ದರ್ಶನ್’ಗೆ ನೀಡದಂತೆ ನಮಗೂ ಐಷಾರಾಮಿ ಸೌಲಭ್ಯ ಕಲ್ಪಿಸಬೇಕು’ ಎಂಬುದು ಗಾಂಜಾ ವ್ಯಾಪಾರಿಗಳ ಪ್ರಮುಖ ಬೇಡಿಕೆ. ಇದು ಈಡೇರದ ಕಾರಣ ತಲೆಕೆಟ್ಟ ಒಬ್ಬ ಆರೋಪಿ ಕಲ್ಲಿನಿಂದ ಜಜ್ಜಿಕೊಂಡಿದ್ದು, ಇನ್ನೊಬ್ಬ ಕಂಬಿಗೆ ತಲೆ ಜಜ್ಜಿಕೊಂಡಿದ್ದಾನೆ. ಆಗ ಅಲ್ಲಿಗೆ ಆಗಮಿಸಿದ ವಾರ್ಡನ್ ಮೇಲೆ ಸಹ ಇಬ್ಬರು ಹಲ್ಲೆಗೆ ಯತ್ನಿಸಿದ್ದಾರೆ. ವಾರ್ಡನ್ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡ ಇಬ್ಬರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೈದಿಗಳ ಕೋಣೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿ ಸಹ ಆರೋಪಿತರು ರಂಪಾಟ ನಡೆಸುತ್ತಿದ್ದಾರೆ. ಆಸ್ಪತ್ರೆಗೆ ತೆರಳುವ ಮುನ್ನ ಕ್ಯಾಮರಾ ಎದುರು ಮಾತನಾಡಿದ ಆರೋಪಿತರು ವಾರ್ಡನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.




