ಯಲ್ಲಾಪುರ: ಬೆಂಗಳೂರಿನ ಯುವಕನೊಬ್ಬ ತನ್ನ ಪ್ರೇಯಸಿ ಜೊತೆ ನಗರ ಸಂಚಾರ ನಡೆಸಿದಕ್ಕಾಗಿ ಪೊಲೀಸರು ಯಲ್ಲಾಪುರದ ಗ್ರಾ ಪಂ ಅಧ್ಯಕ್ಷರೊಬ್ಬರಿಗೆ ನೋಟಿಸ್ ರವಾನಿಸಿದ್ದಾರೆ. ಗ್ರಾ ಪಂ ಅಧ್ಯಕ್ಷರ ಹೆಸರಿನಲ್ಲಿರುವ ವಾಹನ ನೋಂದಣಿ ಸಂಖ್ಯೆಯನ್ನು ಕಿಡಿಗೇಡಿ ತನ್ನ ಬೈಕ್’ಗೆ ಅಳವಡಿಸಿಕೊಂಡು ನಿಯಮ ಉಲ್ಲಂಗಿಸಿರುವುದೇ ಪೊಲೀಸ್ ನೋಟಿಸಿಗೆ ಮೂಲ ಕಾರಣ!
ಮಾಜಿ ಶಿಕ್ಷಕಿಯೂ ಆಗಿರುವ ಆನಗೋಡು ಗ್ರಾ ಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ ಕೆಳಗಿನಪಾಲ ಅವರು KA 31 W 654 ಸಂಖ್ಯೆಯ ಸ್ಕೂಟಿಯನ್ನು ಹೊಂದಿದ್ದಾರೆ. ಆದರೆ, ಬೆಂಗಳೂರಿನ ಯುವಕನೊಬ್ಬ ಇದೇ ಸಂಖ್ಯೆಯನ್ನು ತನ್ನ ಬೈಕಿಗೆ ಅಳವಡಿಸಿಕೊಂಡು ಎಲ್ಲೆಂದರಲ್ಲಿ ಅಡ್ಡಾಡುತ್ತಿದ್ದಾನೆ. ಜೊತೆಗೆ 3ಕ್ಕೂ ಅಧಿಕ ಬಾರಿ ಆತ ಟ್ರಾಫಿಕ್ ನಿಯಮ ಉಲ್ಲಂಗಿಸಿದ್ದು, ನೊಂದಣಿ ಸಂಖ್ಯೆಯ ಆಧಾರದಲ್ಲಿ ಬೆಂಗಳೂರು ಪೊಲೀಸರು ಮೀನಾಕ್ಷಿ ಭಟ್ಟ ಅವರಿಗೆ 1500ರೂ ದಂಡ ಪಾವತಿಸುವಂತೆ ನೋಟಿಸ್ ಹೊರಡಿಸಿದ್ದಾರೆ!
ಮೀನಾಕ್ಷಿ ಭಟ್ಟ ಅವರು ಆನಗೋಡು-ಬಿಸಗೋಡು ಹೊರತುಪಡಿಸಿ ಈವರೆಗೆ ಆ ಸ್ಕೂಟಿಯನ್ನು ಯಲ್ಲಾಪುರ ಪೇಟೆಗೂ ತಂದಿಲ್ಲ. ಹೀಗಿರುವಾಗ ಬೆಂಗಳೂರಿನಿ0ದ ಪದೇ ಪದೇ ಪತ್ರ ಬರುತ್ತಿರುವುದು ಅವರ ತಲೆಬಿಸಿಗೆ ಕಾರಣವಾಗಿದೆ. ಮೀನಾಕ್ಷಿ ಭಟ್ಟ ಅವರ ಹೆಸರಿನಲ್ಲಿವರುವ ವಾಹನ ಸಂಖ್ಯೆಯನ್ನು ದುಷ್ಕಮಿಯೊಬ್ಬ ನಕಲು ಮಾಡಿ ಬೇರೆ ಬೈಕಿಗೆ ಅಳವಡಿಸಿದರೂ ಬೆಂಗಳೂರು ಪೊಲೀಸರಿಂದ ಅದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಸ್ಕೂಟಿಯ ನೊಂದಣಿ ಸಂಖ್ಯೆ ಬೈಕಿಗೆ ಅಳವಡಿಕೆಯಾದರೂ ಅದರ ಬಗ್ಗೆ ಅಲ್ಲಿನ ಪೊಲೀಸರು ತಲೆಕೆಡಿಸಿಕೊಂಡಿಲ್ಲ. ಬದಲಾಗಿ 1500ರೂ ವಸೂಲಿಗಾಗಿ ಅವರು ಪದೇ ಪದೇ ನೋಟಿಸ್ ನೀಡುತ್ತಿದ್ದಾರೆ!
ಪ್ರಸ್ತುತ ತಮ್ಮ ಪ್ರಭಾವ ಬಳಸಿ ಬೆಂಗಳೂರಿನಲ್ಲಿ ತಮ್ಮದೇ ವಾಹನ ಸಂಖ್ಯೆ ನಕಲು ಆಗಿರುವುದನ್ನು ಮೀನಾಕ್ಷಿ ಭಟ್ಟ ಕಂಡು ಹಿಡಿದಿದ್ದಾರೆ. ಆ ವಾಹನ ನಿಯಮ ಉಲ್ಲಂಘಿಸಿದ ಫೊಟೋಗಳನ್ನು ಸಂಗ್ರಹಿಸಿದ್ದಾರೆ. ಇದಕ್ಕಾಗಿ ಅವರು ಅನಗತ್ಯ ಓಡಾಟ ನಡೆಸಿದ್ದರೂ `ತಾನು ತಪ್ಪು ಮಾಡಿಲ್ಲ’ ಎಂದು ಸಾಭೀತು ಮಾಡಿದ್ದಾರೆ. ಇದರೊಂದಿಗೆ ತಮ್ಮ ಸ್ವಂತ ವಾಹನದ ಫೋಟೋವನ್ನು ಲಗತ್ತಿಸಿ ಆ ದುಷ್ಕರ್ಮಿ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಬೆಂಗಳೂರು ಪೊಲೀಸರಿಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ ಕಾರವಾರ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಈ ಪತ್ರ ರವಾನಿಸಿ `ನನಗೂ ಆ ಬೈಕಿಗೂ ಯಾವುದೇ ಸಂಬoಧವಿಲ್ಲ’ ಎಂದು ಲಿಖಿತವಾಗಿ ತಿಳಿಸಿದ್ದಾರೆ. ಜೊತೆಗೆ `ಯಾವುದೇ ಕಾರಣಕ್ಕೂ ತನ್ನದಲ್ಲದ ತಪ್ಪಿಗೆ ದಂಡ ಪಾವತಿಸಲ್ಲ’ ಎಂದವರು ಹೇಳಿದ್ದಾರೆ.





