ಯಲ್ಲಾಪುರ: ಸಾವಿರ ಸಂಖ್ಯೆಯ ಸದಸ್ಯರಿಂದ ಶುರುವಾದ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘ ಈಗಲೂ ಅಷ್ಟೇ ಪ್ರಮಾಣದ ಸದಸ್ಯರನ್ನು ಉಳಿಸಿಕೊಂಡು 25 ವರ್ಷ ಪೂರೈಸಿದೆ. 26ನೇ ವರ್ಷಕ್ಕೆ ಈ ಪಾದಾರ್ಪಣೆ ಮಾಡುತ್ತಿರುವ ಹೊಸ್ತಿಲಿನಲ್ಲಿ ಈ ಸಂಘ ಸಾಧಕ ಕೃಷಿಕರಿಗೆ ಸನ್ಮಾನ ಸೇರಿ ಹಲವು ಕಾರ್ಯಕ್ರಮವನ್ನು ಆಯೋಜಿಸಿದೆ.
ಯಲ್ಲಾಪುರ, ಅಂಕೋಲಾ, ಮುಂಡಗೋಡು ಹಾಗೂ ಜೊಯಿಡಾ ತಾಲೂಕು ಈ ಸಂಘದ ಸೇವಾ ವ್ಯಾಪ್ತಿ. ನೀರಾವರಿ ಪಂಪ್ಸೆಟ್, ಕೃಷಿ ಉಪಕರಣ, ಡ್ರಿಪ್ ಸೇರಿ ಹಲವು ಸೇವೆಗಳನ್ನು ಸ್ಪರ್ಧಾತ್ಮಕ ದರದಲ್ಲಿ ನೀಡುತ್ತಿರುವ ಮಲೆನಾಡು ಸಹಕಾರಿ ಸಂಘಕ್ಕೆ ಗ್ರಾಮೀಣ ಪ್ರದೇಶದ ರೈತರೇ ಮುಖ್ಯ ಗ್ರಾಹಕರು. ರೈತರ ಬಳಿ ಕಾಸಿಲ್ಲದ ಪರಿಸ್ಥಿತಿಯಲ್ಲಿಯೂ ಅಗತ್ಯ ಕೃಷಿ ಉಪಕರಣಗಳನ್ನು ಪೂರೈಸಿ ಅವರ ಆರ್ಥಿಕ ಅಭಿವೃದ್ಧಿಗೆ ನೆರವು ನೀಡಿದ ಹಿರಿಮೆ ಈ ಸಂಘದ್ದು.
`25 ವರ್ಷಗಳ ಹಿಂದೆ ಮನೆ ಮನೆ ತಿರುಗಾಟ ನಡೆಸಿ ಸಂಘ ಸ್ಥಾಪನೆ ಮಾಡಲಾಯಿತು. ಆ ಅವಧಿಯಲ್ಲಿ ಕೃಷಿ ಸಲಕರಣೆಗಳಿಗೆ ಜನ ಹುಬ್ಬಳ್ಳಿ-ಶಿರಸಿಗೆ ಹೋಗಬೇಕಿದ್ದು, ಸಮೀಪದಲ್ಲಿ ಸೇವೆ ನೀಡುವ ಉದ್ದೇಶ ಮಲೆನಾಡು ಸಂಘಕ್ಕಿತ್ತು. ಆಡಳಿತ ಮಂಡಳಿ ಸಹಕಾರ ಹಾಗೂ ಸಿಬ್ಬಂದಿ ಶ್ರಮದಿಂದ ಸಂಘ ಕಳೆದ ವರ್ಷ 47.85 ಲಕ್ಷ ರೂ ಲಾಭಗಳಿಸಿದೆ’ ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ ಸುದ್ದಿಗಾರರಿಗೆ ತಿಳಿಸಿದರು.
`ಸೆಪ್ಟೆಂಬರ್ 13ರಂದು ಮಧ್ಯಾಹ್ನ 3 ಗಂಟೆಗೆ ಅಡಿಕೆ ಭವನದಲ್ಲಿ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ವಾರ್ಷಿಕ ಸಭೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿಯೇ 14 ಸಾಧಕ ಕೃಷಿಕರಿಗೆ ಸನ್ಮಾನಿಸಲಾಗುತ್ತದೆ. ಅವರ ಕೃಷಿ ಸಾಧನೆ ಹಾಗೂ ಮಾರ್ಗದರ್ಶನ ಇತರರಿಗೂ ಮಾದರಿಯಾಗಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಸಂಘದ ಪ್ರಮುಖರಾದ ಎಂ ಜಿ ಭಟ್ಟ ಶೀಗೆಪಾಲ್ ತಿಳಿಸಿದರು.
ಪ್ರಮುಖರಾದ ವಿನಾಯಕ ಹೆಗಡೆ, ಮಧುಕೇಶ್ವರ ಭಟ್ಟ, ಎಂ ಆರ್ ಹೆಗಡೆ ತರೆಹಳ್ಳಿ, ದತ್ತಾತ್ರೇಯ ಬೋಳಗುಡ್ಡೆ ಇದ್ದರು.




