ಕುಮಟಾ: ವಿವಿಧ ಶಾಲೆಗಳಲ್ಲಿ ಪಾಠ ಮಾಡಿ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದ ಶಿಕ್ಷಕಿ ಕಮಲಾಬಾಯಿ ಭಟ್ಟ ಅವರಿಗೆ ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸನ್ಮಾನಿಸಿದರು.
ಕುಮಟಾ ತಾಲೂಕಿನ ಕಡ್ಲೆ ಭಾಗವತಕಟ್ಟೆ ಕಾರಹಿತ್ಲದಯವರಾದ ಕಮಲಾ ಭಟ್ಟ ಅವರು ಶಿರಸಿಯ ಸಾಲ್ಕಣಿ, ಕಾರವಾರದ ಖಾರ್ವಿವಾಡ ಸೇರಿ ಹಲವು ಶಾಲೆಗಳಲ್ಲಿ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಗುರುತಿಸಿದ್ದು, ಕೇಂದ್ರದ ಕಚೇರಿಯಲ್ಲಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು `ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಒದಗಿಸಲು ಶಿಕ್ಷಕರ ರೀತಿಯಲ್ಲಿಯೇ ಪಾಲಕರು ಶ್ರಮಿಸಬೇಕು. ತಮಗಿರುವ ಕೆಲಸದ ಒತ್ತಡಗಳ ನಡುವೆಯೂ ಮಕ್ಕಳಿಗಾಗಿ ಸಮಯ ಕೊಡಬೇಕು’ ಎಂದು ಕರೆ ನೀಡಿದರು.
ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಮಾತನಾಡಿ `ಅರ್ಹ ಶಿಕ್ಷಕರಿಗೆ ಸರ್ಕಾರದ ಪ್ರಶಸ್ತಿಗಳು ಸಿಗುತ್ತಿಲ್ಲ. ಆದರೆ, ಜನ ಸಾಮಾನ್ಯರ ಕೇಂದ್ರ ಅರ್ಹ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿದೆ’ ಎಂದರು. `ಮಕ್ಕಳಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದ್ದು, ಅದನ್ನು ತಡೆಯುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು’ ಎಂದು ಅಭಿಪ್ರಾಯಪಟ್ಟರು. ನಿವೃತ್ತ ಪೊಲೀಸ್ ಅಧಿಕಾರಿ ನಾರಾಯಣ ಭಟ್, ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಸುಧಾಕರ್ ನಾಯ್ಕ, ಮುನ್ನ ಸಾಬ್ ಹಾಜರಿದ್ದರು.




