ಯಲ್ಲಾಪುರ: ಹುಬ್ಬಳ್ಳಿಯ ಅಕ್ಕಿ ಕಂಪನಿಯೊAದು ತಮ್ಮ ಪ್ರಚಾರಕ್ಕಾಗಿ ಪಟ್ಟಣದ ಹಲವು ಸರ್ಕಾರಿ ಆಸ್ತಿಯನ್ನು ವಿರೂಪಗೊಳಿಸಿದೆ. ಸರ್ಕಾರಿ ಕಚೇರಿ, ಗೋಡೆ ಸೇರಿ ಖಾಲಿ ಜಾಗ ಇದ್ದಲೆಲ್ಲ ಈ ಕಂಪನಿಯವರು ತಮ್ಮ ಬಿತ್ತಿಪತ್ರಗಳನ್ನು ಅಂಟಿಸಿದರು. ಪುಕ್ಕಟ್ಟೆ ಜಾಹೀರಾತು ಅಳವಡಿಸುವ ಜನ ಬೀದಿ ದೀಪದ ಕರೆಂಟ್ ಕಂಬವನ್ನು ಸಹ ಬಿಡಲಿಲ್ಲ!
ಅಕ್ರಮ ಜಾಹೀರಾತು ಹಾವಳಿ
ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಕ್ರಮ ಜಾಹೀರಾತುಗಳು ಕಾಣಿಸುತ್ತಿದೆ. ನಿಯಮಗಳ ಪ್ರಕಾರ ಜಾಹಿರಾತು ಹಾಕುವ ಮುನ್ನ ಪಟ್ಟಣ ಪಂಚಾಯತದ ಅನುಮತಿ ಪಡೆಯಬೇಕು. ಇದಕ್ಕೆ ಸಂಬ0ಧಿಸಿದ ಶುಲ್ಕ ಪಾವತಿಸಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆ ಮಾಡುವ ಹಾಗಿಲ್ಲ. ಆದರೆ, ಇದೆಲ್ಲವನ್ನು ಮೀರಿ ಎಲ್ಲೆಂದರಲ್ಲಿ ಜಾಹೀರಾತುಗಳು ಕಾಣಿಸುತ್ತಿದೆ.
ಜ್ಯೋತಿಷ್ಯ, ಶುಭಾಶಯಗಳ ಜೊತೆ ವಿವಿಧ ಕಾರ್ಯಕ್ರಮ ಹಾಗೂ ಶಾಲಾ-ಕಾಲೇಜುಗಳ ಜಾಹೀರಾತುಗಳು ಸಹ ರಾರಾಜಿಸುತ್ತಿದೆ. ಈ ರೀತಿ ಜಾಹೀರಾತು ಅಳವಡಿಸಿದ ಬಹುತೇಕರು ಸರ್ಕಾರಕ್ಕೆ ಹಣ ಪಾವತಿಸಿಲ್ಲ. ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದ್ದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ.
ಕ್ರಮ ಜರುಗಿಸುವ ಭರವಸೆ
`ಕೆಲವರು ಅನುಮತಿ ಪಡೆದು ಜಾಹೀರಾತು ಅಳವಡಿಸಿದ್ದಾರೆ. ಅನುಮತಿ ಪಡಯದೇ ಇರುವ ಜಾಹೀರಾತುಗಳನ್ನು ತೆರವು ಮಾಡಲಾಗುವುದು. ಬೀದಿದೀಪ ಹಾಗೂ ಇನ್ನಿತರ ಸರ್ಕಾರಿ ಆಸ್ತಿ ವಿರೂಪಗೊಳಿಸಿದವರ ವಿರುದ್ಧ ಕ್ರಮ ಜರುಗಿಸುವೆ’ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ತಿಳಿಸಿದರು.




