ಶೃದ್ಧೆ, ನಿಷ್ಠೆ, ಆಸಕ್ತಿ ಹಾಗೂ ಅಧ್ಯಯನದ ಮೂಲಕ ಯಕ್ಷಗಾನ ಪ್ರವೇಶಿಸಿ ತಮ್ಮ ಅರ್ಥಗಾರಿಕಾ ಶೈಲಿಯಿಂದಲೇ ಜನರ ಮನ ಗೆದ್ದವರು ಗೋಡೆಪಾಲಿನ ನಾರಾಯಣ ಗಾಂವ್ಕಾರರು.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ತೆಲಂಗಾರಿನವರಾದ ಅವರು ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸಬಲ್ಲರು. ಜೊತೆಗೆ ಅಷ್ಟೇ ಆಸಕ್ತಿಯಿಂದ ಎಲ್ಲಾ ರೀತಿಯ ಪಾತ್ರಗಳನ್ನು ಅನುಭವಿಸಬಲ್ಲರು. ತಮ್ಮ ಸರಳ ನಡೆನುಡಿ, ಸ್ನೇಹಶೀಲ ಸ್ವಭಾವಗಳಿಂದ ಅವರಿಗೆ ದೊರೆತ ಗೌರವ-ಬಿರುದುಗಳು ಎಲ್ಲಕ್ಕಿಂತ ದೊಡ್ಡದು.
3ನೇ ತರಗತಿಯಲ್ಲಿರುವಾಗ ಕಂಚಿಪಾಲ ರಾಮಣ್ಣನವರ ನಿರ್ದೇಶನ ಮತ್ತು ಸಂಘಟನೆಯ ಮಕ್ಕಳ ಮೇಳದಲ್ಲಿ ಬಾಲಗೋಪಾಲರ ವೇಷ ಮಾಡುವ ಮೂಲಕ ನಾರಾಯಣ ಗಾಂವ್ಕಾರ ಅವರು ರಂಗಪ್ರವೇಶ ಮಾಡಿದರು. ಮುಂದೆ ಮಕ್ಕಳ ಮೇಳದಿಂದ ಪ್ರದರ್ಶಿಸಲ್ಪಟ್ಟ ಸಹದೇವ ದಿಗ್ವಿಜಯ ಮುಂತಾದ ಪ್ರಸಂಗಗಲ್ಲಿ ದ್ರೌಪದಿ, ಕೃಷ್ಣ, ವೀರಭದ್ರ ಹೀಗೆ ಹಲವಾರು ಪಾತ್ರಗಳನ್ನು ನಿಭಾಯಿಸಿದರು. ಬಾಲ್ಯದಲ್ಲಿ ಬೆಳೆದ ಯಕ್ಷಗಾನ ಆಸಕ್ತಿ ಮುಂದೆ ದೊಡ್ಡ ಮರವಾಗಿದ್ದು, ಪ್ರೌಢ ಶಿಕ್ಷಣದ ನಂತರ ಭವಿಷ್ಯದ ಕೃಷಿ ಜೊತೆ ಯಕ್ಷಗಾನದಲ್ಲಿಯೂ ತೊಡಗಿದರು.
ಸಮರ್ಥ ಅರ್ಥಧಾರಿ ಬಾಳಂತನಪಾಲ ನಾರಾಯಣ ಗಾಂವ್ಕಾರರ ಪ್ರೇರಣೆ, ಪ್ರೋತ್ಸಾಹದಿಂದ ಆಟದೊಟ್ಟಿಗೆ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸಿದರು. ತಮ್ಮ ಅಧ್ಯಯನ ಆಸಕ್ತಿಯಿಂದ ಪ್ರಸಂಗ, ಪಾತ್ರ, ಭಾವನೆಗಳ ಕುರಿತು ಆಳವಾಗಿ ಅರಿತರು. ಯಲ್ಲಾಪುರ, ಅಂಕೋಲಾ ಭಾಗದಲ್ಲಿ ಜರುಗುತ್ತಿದ್ದ ಆಟ – ಕೂಟಗಳೆರಡರಲ್ಲೂ ಭಾಗವಹಿಸಿ ಸೈ ಎನಿಸಿಕೊಂಡರು. ಯಯಾತಿ, ಬಾಹುಕ, ವಿಕ್ರಮಾದಿತ್ಯ, ಸಂಜಯ, ಶೂರ್ಪನಖಿ, ಸುಗ್ರೀವ, ದೇವಯಾನಿ ಪಾತ್ರದಲ್ಲಿ ಮಿಂಚಿದ ಅವರು ಹಾಸ್ಯ ಪಾತ್ರಗಳಲ್ಲಿ ಸಹ ಪ್ರತಿಭೆ ಪ್ರದರ್ಶಿಸಿದರು.
55 ವರ್ಷಗಳ ಕಾಲ ಯಕ್ಷಗಾನ ಕುಣಿದ ಅವರು ಇದೀಗ ರಂಗ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಕಡಿಮೆ ಮಾಡಿದ್ದಾರೆ. ಆದರೆ, ಯಕ್ಷಗಾನ, ತಾಳಮದ್ದಳೆಗಳ ವೀಕ್ಷಣೆ, ಅಧ್ಯಯನದಲ್ಲಿನ ಆಸಕ್ತಿ ಒಂಚೂರು ಕಡಿಮೆಯಾಗಿಲ್ಲ.
ಗೋಡೆಪಾಲ ನಾರಾಯಣ ಗಾಂವ್ಕಾರರ ಅರ್ಥಗಾರಿಕೆ ವಿಡಿಯೋ ಇಲ್ಲಿ ನೋಡಿ…
– ಕರ್ನಾಟಕ ಕಲಾ ಸನ್ನಿಧಿ




