ವರ್ಷಗಳು ಉರಳಿದವು. ಅಧಿಕಾರಿಗಳು ಬದಲಾದರು. ತಲೆಮಾರು ಕಳೆದವು. ಆದರೆ, ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳು ಮಾತ್ರ ಬಗೆ ಹರಿಸಿದವರಿಲ್ಲ.
ನ್ಯಾಯಯುತ ಬೇಡಿಕೆ ಮುಂದಿಟ್ಟು ದಶಕಗಳಿಂದ ನಡೆಯುತ್ತಿರುವ ಸಾವಿರಾರು ಪ್ರತಿಭಟನೆ, ಲಕ್ಷಾಂತರ ಮನವಿ, ಆಂದೊಲನಗಳಿಗೆ ಲೆಕ್ಕವಿಲ್ಲ. ಪ್ರತಿಬಾರಿಯೂ ಚುನಾವಣೆ ಮುಗಿದ ದಿನ ಭರವಸೆಗಳೆಲ್ಲ ವರಸೆಯಾಗಿ ಬದಲಾದವು. ಚುನಾವಣೆ ಮುನ್ನಾ ದಿನ ಸಿಕ್ಕ ಆಶ್ವಾಸನೆಗಳು ಮತದಾನದ ಮರುದಿನ ಇರಲಿಲ್ಲ. ಇದ್ಯಾವುದು ಅರಣ್ಯ ಅತಿಕ್ರಮಣದಾರರಿಗೆ ಪ್ರಯೋಜನಕ್ಕೂ ಬಾರಲಿಲ್ಲ. ಸರ್ಕಾರ ಒಮ್ಮೆಯೂ ಸರಿಯಾಗಿ ಅತಿಕ್ರಮಣದಾರರ ಅಳಲು ಆಲಿಸಿಲ್ಲ. ಐದು ದಶಕಗಳ ಕಾಲದಿಂದಲೂ ಕಾಡನ್ನು ಪೂಜಿಸಿ ಅಲ್ಲಿಯೇ ಕೊಂಚ ಅತಿಕ್ರಮಿಸಿ ಬದುಕು ಕಟ್ಟಿಕೊಂಡವರಿಗೆ ಸರ್ಕಾರ ತನ್ನ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಕಟಿಸಿಲ್ಲ.
ಅರಣ್ಯಾಧಿಕಾರಿಗಳ ದಬ್ಬಾಳಿಕೆ ಮುಂದೆ ಮುಗ್ದ ಅರಣ್ಯವಾಸಿಗಳು ಮಂಡಿಯೂರಿ ಕುಳಿತರು. `ತಮಗೆ ಬದುಕಲು ಬಿಡಿ’ ಎಂದು ಅರಣ್ಯವಾಸಿಗಳು ಅಂಗಲಾಚಿದರು. ಪ್ರಯೋಜನ ಬಾರದಿದ್ದಾಗ ಬೀದಿಗಿಳಿದು ಹೋರಾಟವನ್ನು ನಡೆಸಿದರು. ಬಡತನದಲ್ಲಿ ಬಿದ್ದವರಿಗೂ ಬದುಕು ಅನಿವಾರ್ಯವಾದ್ದರಿಂದ ಕಾಡನ್ನು ನಂಬಿದವರು ಬೀದಿಗೆ ಬಂದರು. ಹೋರಾಟದ ಭಾಗವಾಗಿ ಪಾದಯಾತ್ರೆ ನಡೆಸಿದರು. ಆದರೆ, ಈವರೆಗೂ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ.
ಈಗಲೂ ತಲೆತಲಾಂತರಗಳಿoದ ಕಾಡು ನಂಬಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಜನರಿಗೆ ಸರ್ಕಾರದ ಹೊಸ ಹೊಸ ಕಾನೂನುಗಳು ಉಸಿರಾಡಲು ಬಿಡುತ್ತಿಲ್ಲ. `ತಮಗೊಂದು ಪುಟ್ಟಭೂಮಿ ಕೊಡಿ’ ಎಂದು ಅಂಗಲಾಚಿದ ಸಾವಿರಾರು ಜೀವಗಳು ಭೂಮಿಯ ಹಕ್ಕು ಸಿಗದೇ ಸಾವನಪ್ಪಿವೆ. ಆದರೆ, ಕಳೆದ ಆರು ದಶಕಗಳಿಂದ ಒಂದೇ ಜಾಗದಲ್ಲಿ ವಾಸವಿದ್ದರೂ ಆ ಕುಟುಂಬದವರಿಗೆ ಭೂಮಿ ಮೇಲೆ ಹಕ್ಕು ಸಿಕ್ಕಿಲ್ಲ.
60 ವರ್ಷಗಳಿಗಿಂತ ಹಿಂದಿನಿoದ ಅದೇ ಭೂಮಿಯಲ್ಲಿ ವಾಸಿಸುತ್ತಿದ್ದರೂ, ಆ ಭೂಮಿಯ ಮೇಲೆ ಅವರಿಗೆ ಅಧಿಕಾರವಿಲ್ಲ. ಅರಣ್ಯಭೂಮಿಯನ್ನು ಒತ್ತುವರಿ ಮಾಡಿಕೊಂಡು ಬಂದಿರುವವರ ಹೋರಾಟಕ್ಕೂ ಸ್ಪಂದನೆ ದೊರೆತಿಲ್ಲ. ನ್ಯಾಯಯುತವಾದ ಬೇಡಿಕೆ ಈಡೇರಿಕೆಗಾಗಿ ನೂರಾರು ಸಂಘಟನೆಗಳು, ಸಾವಿರಾರು ಮುಖಂಡರು, ಲಕ್ಷಾಂತರ ಅರಣ್ಯವಾಸಿಗಳು ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ತನ್ನ ನಿಲುವನ್ನು ಪ್ರಕಟಿಸುವ ಮೂಲಕ ಅರಣ್ಯ ಅತಿಕ್ರಮಣದಾರರಿಗೆ ಸಮಾಧಾನ ಮಾಡುವ ಯತ್ನವನ್ನು ನಡೆಸಿಲ್ಲ. ಹತ್ತು ಹಲವು ಜನಪ್ರತಿನಿಧಿಗಳು ಕೂಡ ಈ ಹೋರಾಟದಲ್ಲಿ ಭಾಗಿಯಾಗಿದ್ದರೂ, ಅವರಿಂದ ಬಡವರಿಗೆ ನ್ಯಾಯ ಕೊಡಿಸಲಿಕ್ಕೆ ಸಾಧ್ಯವಾಗಿಲ್ಲ.
ಅರಣ್ಯ ಅತಿಕ್ರಮಣದಾರರು ಈಗಲೂ ತಮ್ಮ ಬಳಿ ಇರುವ ಹಳೆಯ ಕಾಗದ ಪತ್ರಗಳನ್ನು ಹಿಡಿದು ಸರ್ಕಾರಿ ಕಚೇರಿ ಅಲೆದಾಡುತ್ತಿದ್ದಾರೆ. ಚಿಕ್ಕ ಪುಟ್ಟ ಕೆಲಸ ಕಾರ್ಯಗಳಿಗೂ ದಿನವಿಡಿ ಕಾಯುತ್ತಿದ್ದಾರೆ. ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಪಾರಂಪರಿಕ ಅರಣ್ಯವಾಸಿಗಳ ಅರಣ್ಯಭೂಮಿ ಸಾಗುವಳಿ ಹಕ್ಕನ್ನು ನಿರ್ಧರಿಸುವ ಸಂದರ್ಭದಲ್ಲಿ ದಾಖಲೆಯ ಸಾಕ್ಷಿಗಳನ್ನು ಪೂರೈಸಲು ಒತ್ತಾಯಿಸತಕ್ಕದ್ದಲ್ಲ ಎಂಬ ಮೂಲ ಕಾಯ್ದೆಗೆ ತಿದ್ದುಪಡೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ.
`ತಾವು ವಾಸಿಸುತ್ತಿರುವ ಕಾಡಿನ ಜಾಗದ ಪಟ್ಟಾ ವಿತರಿಸಿ’ ಎಂಬ ಹೋರಾಟ ಶುರುವಾಗಿ ಹಲವು ವರ್ಷ ಕಳೆದಿದೆ. ಆದರೆ, ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ವಿತರಿಸುವ ಕೆಲಸ ಈವರೆಗೂ ಸಮರ್ಫಕವಾಗಿ ನಡೆದಿಲ್ಲ. ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ನೀಡುವ ವಿಷಯದಲ್ಲಿ ಯಾವ ರಾಜಕಾರಣಿ ಸಹ ಜನರ ನಂಬಿಕೆ ಉಳಿಸಿಕೊಂಡಿಲ್ಲ!




